ರಂಗಿ ತರಂಗ, ಅವನೇ ಶ್ರೀಮನ್ನಾರಾಯಣದಂತಹ ಚಿತ್ರಗಳನ್ನು ನೀಡಿದ್ದ ನಿರ್ಮಾಪಕ ಎಚ್. ಕೆ ಪ್ರಕಾಶ್, ನಟ ಅಜಯ್ ರಾವ್ ಜೊತೆ ಹೊಸ ಚಿತ್ರ ಘೋಷಿಸಿದ್ದಾರೆ. ಚಿತ್ರದ ಹೆಸರು ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’.
ಚಿತ್ರದ ಪೋಸ್ಟರ್ ಸೋಮವಾರ ಬಿಡುಗಡೆಗೊಂಡಿದ್ದು, ನೆಟ್ಫ್ಲಿಕ್ಸ್ನ ಜನಪ್ರಿಯ ಮನಿಹೈಸ್ಟ್ ವೆಬ್ಸರಣಿ ನೆನಪಿಸುವಂತಿದೆ. ಆದರೆ ಕಥೆ ಅದಲ್ಲ. ಬ್ಯಾಂಕ್, ದುಡ್ಡಿಗೆ ಸಂಬಂಧಿಸಿದ ವಿಚಿತ್ರ ಕಥೆಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ ಅಭಿಷೇಕ್ ಎಂ.
ರಕ್ಷಿತ್ ಶೆಟ್ಟಿಯವರ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡುವ, ಆ ತಂಡದ ಭಾಗವಾಗಿರುವ ಅಭಿಷೇಕ್ಗೆ ಚಿತ್ರರಂಗ ಹೊಸತೇನಲ್ಲ. ಈ ಹಿಂದೆ ಒಂದು ರೂಪಾಯಿ ಇಟ್ಟುಕೊಂಡು ಬೆಂಗಳೂರಿನಂತಹ ನಗರದಲ್ಲಿ ಹೇಗೆ ದಿನವಿಡಿ ಬದುಕುಬಹುದು, ಎಲ್ಲೆಲ್ಲಿ ಆ ದುಡ್ಡನ್ನು ದ್ವಿಗುಣಗೊಳಿಸಬಹುದು ಎಂಬ ಮಜವಾದ ಪರಿಕಲ್ಪನೆಯ ಕಿರುಚಿತ್ರ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು.
ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಪಿನಾಕ’ ಎಂಬ ವಿಎಫ್ಎಕ್ಸ್ ಸ್ಟುಡಿಯೋದೊಂದಿಗೆ ಅವನೇ ಶ್ರೀಮನ್ನಾರಾಯಣ, ಚಾರ್ಲಿ ಸೇರಿದಂತೆ ರಕ್ಷಿತ್ ಶೆಟ್ಟಿ ಬ್ಯಾನರ್ ಎಲ್ಲ ಸಿನಿಮಾಗಳಿಗೂ ವಿಎಫ್ಎಕ್ಸ್ ವಿನ್ಯಾಸಗಾರನಾಗಿ ಕೆಲಸ ಮಾಡಿದ್ದಾರೆ.
ಹೆಚ್. ಕೆ ಪ್ರಕಾಶ್ ಅವರು ತಮ್ಮ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.