ಚೆನ್ನೈ: ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾವನ್ನು ನೆಟ್ಫಿಕ್ಸ್ನಿಂದ ತೆಗೆದುಹಾಕಲಾಗಿದೆ.
ಅನುಮತಿಯಿಲ್ಲದೇ ತಮ್ಮ ಸಂಯೋಜನೆಯ ಮೂರು ಹಾಡುಗಳನ್ನು ಸಿನಿಮಾದಲ್ಲಿ ಬಳಸಿದ್ದರ ವಿರುದ್ಧ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪುರಸ್ಕರಿಸಿದ ಕೋರ್ಟ್, ಹಾಡುಗಳನ್ನು ತೆಗೆದುಹಾಕದೇ ಸಿನಿಮಾ ಪ್ರದರ್ಶಿಸಬಾರದು ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ಗೆ ಸೂಚನೆ ನೀಡಿತ್ತು.
ಏಕಾಏಕಿ ನೆಟ್ಫ್ಲಿಕ್ಸ್ನಿಂದ ಸಿನಿಮಾ ತೆಗೆದು ಹಾಕಿರುವ ಬಗ್ಗೆ ಸಿನಿಪ್ರಿಯರು ಗಮನ ಸೆಳೆದಿದ್ದಾರೆ. ಸಿನಿಮಾ ಹೆಸರನ್ನು ಹುಡುಕಿದಾಗ, ‘ನಮಗೆ ಈ ಸಿನಿಮಾ ಸಿಕ್ಕಿಲ್ಲ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅಧಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಅರ್ಜುನ್ ದಾಸ್, ಪ್ರಭು, ಪ್ರಸನ್ನ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏನಿದು ವಿವಾದ:
ಇದೇ ಏಪ್ರಿಲ್ನಲ್ಲಿ ಸಿನಿಮಾದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದ ಇಳಯರಾಜ, ಅನುಮತಿಯಿಲ್ಲದೇ ಹಾಡುಗಳನ್ನು ಬಳಸಿದ್ದಕ್ಕಾಗಿ ₹5 ಕೋಟಿ ಪರಿಹಾರ ನೀಡುವಂತೆ ಕೇಳಿದ್ದರು. ತಕ್ಷಣವೇ ಸಿನಿಮಾದಿಂದ ಹಾಡುಗಳನ್ನು ತೆಗೆದುಹಾಕುವಂತೆ ಹೇಳಿದ್ದರು.
‘ಒಟ್ಟಾ ರುಬಾ ಥರೇನ್’, ‘ಎನ್ ಜೋಡಿ ಮಂಜ ಕುರುವಿ’ ಮತ್ತು ‘ಇಲಮೈ ಇಧೋ ಇಧೋ’ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂಬುವುದು ಅವರ ಆರೋಪವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.