ADVERTISEMENT

‘ಅಮರ ಪ್ರೇಮಿ ಅರುಣ್’ ಶೀರ್ಷಿಕೆ ಅನಾವರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 11:57 IST
Last Updated 4 ಏಪ್ರಿಲ್ 2021, 11:57 IST
‘ಅಮರ ಪ್ರೇಮಿ ಅರುಣ್’ ಚಿತ್ರದ ಮುಹೂರ್ತಕ್ಕೆ ಗಿರೀಶ್‌ ಕಾಸರವಳ್ಳಿ ಚಾಲನೆ ನೀಡಿದರು 
‘ಅಮರ ಪ್ರೇಮಿ ಅರುಣ್’ ಚಿತ್ರದ ಮುಹೂರ್ತಕ್ಕೆ ಗಿರೀಶ್‌ ಕಾಸರವಳ್ಳಿ ಚಾಲನೆ ನೀಡಿದರು    

‘ಒಲವು ಸಿನಿಮಾ’ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಅಮರ ಪ್ರೇಮಿ ಅರುಣ್’ ಚಿತ್ರದ ಮುಹೂರ್ತ ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಮೊದಲ ದೃಶ್ಯಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ - ಸಾಹಿತಿ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು.

ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಈ ಆರು ಜನ ನಿರ್ದೇಶಕರು ಸೇರಿ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.

ADVERTISEMENT

ಬಿ.ಸುರೇಶ್ ಮಾತನಾಡಿ, ‘ಪ್ರವೀಣ್ ನಮ್ಮ ಬಳಿಯು ಕೆಲಸ‌ ಮಾಡಿರುವ ಹುಡುಗ.‌ ನಮ್ಮ ಸಕ್ಕರೆ ಸಿನಿಮಾಗೆ ಸಹ ನಿರ್ದೇಶನ ಮಾಡಿದ್ದಾರೆ. ಉತ್ತಮ ಕಥೆಗಾರನಾಗಿರುವ ಈತ ಹಲವು ಮೆಟ್ಟಿಲುಗಳನ್ನು ದಾಟಿ ನಿರ್ದೇಶಕನಾಗುತ್ತಿದ್ದಾನೆ, ಶುಭವಾಗಲಿ’ ಎಂದರು.

ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಸಹ ಪ್ರವೀಣ್ ಕೂರ್ಮಾವತಾರ ಚಿತ್ರದಲ್ಲಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಹೇಳುತ್ತಾ, ನಾನು ಹತ್ತು ವರ್ಷದಿಂದ ಕಂಡಿರುವುದು ಪ್ರವೀಣ್ ಅವರಿಗೆ ಕೆಲಸದಲ್ಲಿರುವ ಶ್ರದ್ಧೆ. ಆ ಶ್ರದ್ಧೆ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ’ ಎಂದರು.

ಯೋಗರಾಜ್ ಭಟ್ ಮಾತನಾಡಿ, ‘ಇಲ್ಲಿರುವ ಎಲ್ಲಾ ನಿರ್ದೇಶಕರ ಬಳಿ ನಾನು ಹಾಗೂ ಪ್ರವೀಣ ಕೆಲಸ‌ ಮಾಡಿದ್ದೇವೆ. ಇಂದು ಅವರೊಟ್ಟಿಗೆ ಕುಳಿತಿರುವುದು ನಮ್ಮ ಸೌಭಾಗ್ಯ. ಮೊದಲ ಚಿತ್ರ ನಿರ್ದೇಶಿಸುತ್ತಿರುವ ಪ್ರವೀಣನಿಗೆ ಒಳ್ಳೆಯದಾಗಲಿ’ ಎಂದರು.

‘ಇತರರೊಂದಿಗೆ ಕತೆಗಳು ಮತ್ತು ಸಿನಿಮಾಗಳನ್ನು ಚರ್ಚಿಸುವ ಮತ್ತು ಅನಿಸಿಕೆಗಳನ್ನು ಸ್ವೀಕರಿಸುವ ಗುಣ ಚೆನ್ನಾಗಿದೆ ಪ್ರವೀಣನಿಗೆ. ಅವನ ಸಾಹಿತ್ಯದ ಅಭಿರುಚಿ ಇರುವ ಅವನು ಒಳ್ಳೊಳ್ಳೆಯ ಸಿನಿಮಾಗಳನ್ನು ಕೊಡಲಿ. ತಂಡಕ್ಕೆ ಶುಭವಾಗಲಿʼ ಎಂದರು.

ಎಂ.ಕೆ.ಸುಬ್ರಹ್ಮಣ್ಯ ಮಾತನಾಡಿ, ‘ಬಿಡುಗಡೆಯಾಗುವ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡುವ ಮತ್ತು ಅವುಗಳ ಬಗ್ಗೆ ಚೆನ್ನಾಗಿ ಮಾತಾಡುವ ಪ್ರವೀಣ ಅವರು ಬರೆಯುವ ಕತೆಗಳು ಗಟ್ಟಿ ಕತೆಗಳು’ ಎಂದರು ಅಭಯ ಸಿಂಹ.

ಯುಗಾದಿ ಬಳಿಕ ಚಿತ್ರೀಕರಣ: ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ‘ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ.‌ ಹಾಗಾಗಿ ನಮ್ಮ ಚಿತ್ರದ ಎಲ್ಲಾ ಕಲಾವಿದರು ಆ ಪ್ರಾಂತೀಯ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್ ಯುಗಾದಿ ಆದ ಮೇಲೆ ಚಿತ್ರೀಕರಣ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗ ಕೆಲಸ ಆರಂಭಿಸಿದ್ದೇನೆ’ ಎಂದರು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್.

‘ನಾವು ಒಂದು ಊರಿಂದ ಮತ್ತೊಂದು ಊರಿಗೆ ಹೋಗುವಾಗ ಪಾಸಿಂಗ್ ನಲ್ಲಿ ಬಳ್ಳಾರಿ ನೋಡಿರುತ್ತೇವೆ.‌ ಆದರೆ ಇದರಲ್ಲಿ ನಾವು ನೋಡಿರದ ಬಳ್ಳಾರಿಯನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ’ ಎನ್ನುವುದು ಛಾಯಾಗ್ರಾಹಕ ಪ್ರವೀಣ್ ಎಸ್. ಅವರ ಅನಿಸಿಕೆ.

ಹರಿಶರ್ವಾ ಈ ಚಿತ್ರದ ನಾಯಕ. ಕಲಾವಿದರಾದ ದೀಪಿಕಾ ಆರಾಧ್ಯ ಹಾಗೂ ಭೂಮಿಕಾ ರಘು, ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರವೀಣ್ ಕುಮಾರ್ ಅವರ ಸ್ನೇಹಿತರು ಹಾಗೂ ಸಂಬಂಧಿಕರು ಸೇರಿ ‘ಒಲವು ಸಿನಿಮಾ’ ಎಂಬ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌

ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದಾರೆ. ಮಂಡ್ಯ ಮಂಜು ಕಾರ್ಯಕಾರಿ ನಿರ್ಮಾಣ, ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.