ADVERTISEMENT

ಅಂಬರೀಶ್‌ ನೆನಪು: ಜಗ್ಗೇಶ್‌ ಹಂಚಿಕೊಂಡ ಮೂರು ಪ್ರಸಂಗ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2020, 8:19 IST
Last Updated 29 ಮೇ 2020, 8:19 IST
ಅಂಬರೀಶ್‌ ಮತ್ತು ಜಗ್ಗೇಶ್‌ ಅವರ ಆತ್ಮೀಕ ಕ್ಷಣದ ಚಿತ್ರ
ಅಂಬರೀಶ್‌ ಮತ್ತು ಜಗ್ಗೇಶ್‌ ಅವರ ಆತ್ಮೀಕ ಕ್ಷಣದ ಚಿತ್ರ    

ಬೆಂಗಳೂರು: ಇಂದು (ಮೇ 29) ರೆಬಲ್‌ ಸ್ಟಾರ್‌ ಅಂಬರೀಶ್ ಅವರ 69ನೇ ಜನ್ಮದಿನ, ಅವರ ಚಿತ್ರರಂಗದ ಒಡನಾಡಿ ನವರಸ ನಾಯಕ ಜಗ್ಗೇಶ್‌ ಅವರು ಅಂಬರೀಶ್‌ ಅವರ ಜೊತೆಗಿನ ಮೂರು ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.

ಕಡೇ ಭೇಟಿ

ಅಂಬರೀಶ್‌ ಮತ್ತು ಜಗ್ಗೇಶ್‌ ಅವರು ಒಟ್ಟಿಗೆ ಇರುವ ಚಿತ್ರವೊಂದನ್ನು ಜಗ್ಗೇಶ್ ಅಭಿಮಾನಿ ಬಳಗ ಶುಕ್ರವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಈ ಚಿತ್ರವನ್ನು ರೀಟ್ವೀಟ್‌ ಮಾಡಿರುವ ಜಗ್ಗೇಶ್‌, ‘ನಾನು ಅಂಬಿ ಸರ್ ತೆಗೆಸಿಕೊಂಡ ಕಡೆಯ ಚಿತ್ರವಿದು. ಹಾಗೂ, ಅವರ ಜೊತೆ ಕಡೆ ಊಟ ಮಾಡಿದ ಗಳಿಗೆ. ಅಂದು ತುಂಬ ಸಂತೋಷವಾಗಿ ಒಟ್ಟಿಗೆ ಊಟಮಾಡಿದೆವು. ನಂತರ 3 ತಿಂಗಳಿಗೆ ಅಂಬರೀಶ್‌ ನಮ್ಮನ್ನು ಅಗಲಿ ಹೋದರು. ಈ ದಿನ ಅವರು ಅಭಿಮಾನಿಗಳಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಸಿಕ್ಕು ಅವರದೆ ಶೈಲಿಯಲ್ಲಿ ಮಾತಾಡುತ್ತಿದ್ದರು ಅನ್ನಿಸುತ್ತದೆ. ಕನ್ನಡದ ಮಾಣಿಕ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು,’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ರೌಡಿ ಎಂಎಲ್‌ಎ ಸಂಭಾವನೆ

‘ರೌಡಿ ಎಂಎಲ್‌ಎ’ ಚಿತ್ರದಲ್ಲಿನ ನನ್ನ ಪಾತ್ರಕ್ಕೆ ₹50 ಸಾವಿರ ಸಂಭಾವನೆ ಕೇಳಿದ್ದೆ. ಮ್ಯಾನೇಜರ್ ಸಾಧ್ಯವಿಲ್ಲಾ, ಬೇಡ ಎಂದು ಬೇರೆ ನಟನನ್ನು ಬುಕ್ ಮಾಡಿದ. ಅಂಬಿ ಸಾರ್‌ಗೆ ವಿಷಯ ತಿಳಿದು ಮ್ಯಾನೇಜರ್‌ಗೆ ಬೈದು ಆ ಪಾತ್ರಕ್ಕೆ ಅವನೇ (ಜಗ್ಗೇಶ್‌) ಸೂಕ್ತ ಎಂದು ನನ್ನನ್ನೇ ಬುಕ್ ಮಾಡಿದರು. ಆಗ ಸಂಭಾವನೆ ₹75 ಸಾವಿರಕ್ಕೆ ಏರಿತು. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕನ ಚಪ್ಪಾಳೆ ನೋಡಿ ಅಂಬಿ ಸರ್‌ ಭುಜತಟ್ಟಿ ಹರಸಿದರು,’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇಂದು ಯಾರಿಗೂ ಆತ್ಮೀಯ ಭಾವವಿಲ್ಲ

‘ನಮ್ಮಿಬ್ಬರ (ಅಂಬರೀಶ್‌–ಜಗ್ಗೇಶ್‌) ಸಲುಗೆ ಪ್ರೀತಿ ಹೇಳಲು ಅಸಾಧ್ಯ. ಸಂದೇಶ್‌ ನಾಗರಾಜ್ ಅವರು ರಾತ್ರಿ 2 ಗಂಟೆಯಲ್ಲಿ ಊಟ ಮಾಡುವಾಗ ಹೆಣ್ಣು ಧ್ವನಿಯಲ್ಲಿ ಬಾಗಿಲು ತೆಗೆರಿಪ್ಪ ‘ಐ ವಾಂಟ್‌ ಯು’ ಎಂದು ಕಿರುಚಿದೆ. ಇಬ್ಬರು ಅದುರಿ ಬಿದ್ದು ಹೊಡೆಯಲು ಹೊರಬಂದು, ನಗು ತಡೆಯಲಾಗದೆ ಒದ್ದಾಡಿದರು! ನಾವು ಯಾವಾಗಲೂ ಖುಷಿಯಾಗಿರುತ್ತಿದ್ದೆವು. ಇಂದು ಯಾರಿಗೂ ಆ ಆತ್ಮೀಯ ಭಾವವೇ ಇಲ್ಲಾ. ಕೇವಲ ನಾನು ನಾನು ನಾನು,’ ಎಂದು ಹೇಳುವ ಮೂಲಕ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ಇಂದಿನ ಪರಿಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.