ADVERTISEMENT

ಅಭಿಷೇಕ್‌ ಗೆಲುವು ಶ್ಲಾಘಿಸಿದ ಅಮಿತಾಭ್‌ ಬಚ್ಚನ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 7:07 IST
Last Updated 18 ಡಿಸೆಂಬರ್ 2022, 7:07 IST
   

ಅಭಿಷೇಕ್‌ ಬಚ್ಚನ್‌ ಒಡೆತನದ ಜೈಪುರ್‌ ಪಿಂಕ್‌ ಪ್ಯಾಂಥರ್‌ 2ನೇ ಬಾರಿಗೆ ಪ್ರೊ ಕಬ್ಬಡ್ಡಿ ಚಾಂಪಿಯನ್‌ ಆಗಿದೆ. ಈ ಗೆಲುವನ್ನು ಸಂಭ್ರಮಿಸಿರುವ ಅಮಿತಾಭ್‌ ಬಚ್ಚನ್‌, ಮೌನವಾಗಿ ಗುರಿ ಸಾಧಿಸಿರುವ ಅಭಿಷೇಕ್‌ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮಿತಾಭ್‌, ‘ನೀನು ನಿನ್ನ ಉದ್ದೇಶಿತ ದಾರಿಯಲ್ಲಿ ಮೌನವಾಗಿ ಕೆಲಸ ಮಾಡಿದ್ದೀಯ. ನೀನು ಎಂದಿಗೂ ನಿನ್ನ ಸಂಕಲ್ಪದ ದಾರಿ ತಪ್ಪಿಸಲಿಲ್ಲ. ಪೂರ್ವಾಗ್ರಹ ಟೀಕೆಗಳನ್ನೆಲ್ಲ ಮೌನವಾಗಿ ಎದುರಿಸಿ ಸದ್ದಡಿಗಿಸಿರುವೆ. ನೀನು ಚಾಂಪಿಯನ್ ಅಭಿಷೇಕ್! ಮತ್ತು ನೀನು ಯಾವಾಗಲೂ ಚಾಂಪಿಯನ್ ಆಗಿ ಉಳಿಯುತ್ತೀಯ’ಎಂದಿದ್ದಾರೆ.

ತನ್ನ ಪುತ್ರನ ಕುರಿತ ಅಮಿತಾಬ್‌ ಪ್ರೀತಿ ಮತ್ತು ಹೆಮ್ಮೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ತಮ್ಮ ಮಗನ ಒಡೆತನದ ತಂಡದ ವಿಜಯವನ್ನು ಅಮಿತಾಭ್‌ ಸರಣಿ ಟ್ವೀಟ್‌ಗಳ ಮೂಲಕ ಸಂಭ್ರಮಿಸಿದ್ದಾರೆ. ಸೋಲಿನ ಕುರಿತಾದ ಈ ಹಿಂದಿನ ಎಲ್ಲ ಟೀಕೆಗಳಿಗೂ ಅಭಿಷೇಕ್‌ ಕೆಲಸದ ಮೂಲಕ, ಸಾಧನೆಯೊಂದಿಗೆ ಉತ್ತರಿಸಿದ್ದಾನೆ ಎಂಬರ್ಥದಲ್ಲಿ ಅಮಿತಾಭ್‌ ಮಾತನಾಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಷೇಕ್‌, ನಾವು ನಿಮ್ಮನ್ನು ಮಿಸ್‌ ಮಾಡಿಕೊಂಡಿದ್ದೇವೆ. ಪೂರ್ತಿ ತಂಡದ ಪರವಾಗಿ ನಿಮಗೆ ಧನ್ಯವಾದಗಳು ಎಂದಿದ್ದಾರೆ.

ಮುಂಬೈನ ಡೋಮ್ ಎನ್‌ಎಸ್‌ಸಿಐ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಒಳಾಂಗಣದಲ್ಲಿ ಶನಿವಾರ ನಡೆದ ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜೈಪುರ 33–29ರಿಂದ ಪುಣೇರಿ ತಂಡವನ್ನು ಮಣಿಸಿದೆ. ಅಭಿಷೇಕ್‌ ಬಚ್ಚನ್‌–ಐಶ್ವರ್ಯಾ ರೈ ಪಂದ್ಯ ವೀಕ್ಷಿಸಿ ಗೆಲುವನ್ನು ಸಂಭ್ರಮಿಸಿದ್ದರು. ಅಮಿತಾಭ್‌ ಪಂದ್ಯ ವೀಕ್ಷಿಸಲು ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.