ADVERTISEMENT

3 ದಿನದಲ್ಲಿ ಅಮಿತಾಭ್‌ ಮನೆಗೆ: ಅಭಿಮಾನಿಗಳು, ಹಿತೈಷಿಗಳಿಗೆ ‘ಬಿಗ್‌ ಬಿ’ ಕೃತಜ್ಞತೆ

‘ನಿಮ್ಮ ಪ್ರಾರ್ಥನೆ ಕೇಳುತ್ತಿದೆ, ಪ್ರೀತಿ ಕಾಣುತ್ತಿದೆ’

ಏಜೆನ್ಸೀಸ್
Published 19 ಜುಲೈ 2020, 7:53 IST
Last Updated 19 ಜುಲೈ 2020, 7:53 IST
ಅಮಿತಾಬ್‌ ಬಚ್ಚನ್‌
ಅಮಿತಾಬ್‌ ಬಚ್ಚನ್‌   

‘ನಮ್ಮ ಆರೋಗ್ಯಕ್ಕಾಗಿ ನೀವು ಸಲ್ಲಿಸುತ್ತಿರುವ ಪ್ರಾರ್ಥನೆಗಳು ನಮಗೆ ಕೇಳುತ್ತಿವೆ. ನೀವು ನಮ್ಮ ಮೇಲಿಟ್ಟಿರುವ ಪ್ರೀತಿ ಮತ್ತು ಕಾಳಜಿ ಕಾಣುತ್ತಿವೆ...’

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ನಟ ಅಮಿತಾಭ್ ಬಚ್ಚನ್ ಅವರು ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಸಲ್ಲಿಸಿದ ಕೃತಜ್ಞತೆಯ ಸಾಲುಗಳಿವು.

ಮಗ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾಧ್ಯ ಜತೆ ಬಾಂದ್ರಾದ ‘ಜಲ್ಸಾ’ ಬಂಗಲೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸುತ್ತಿರುವ ಹಳೆಯ ಚಿತ್ರವನ್ನು ಟ್ವಿಟರ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ. ತಮ್ಮ ಕುಟುಂಬ ಸದಸ್ಯರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಅಭಿಮಾನಿಗಳಿಗೆ ಆಸ್ಪತ್ರೆಯಿಂದಲೇ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

74 ವರ್ಷದ ಹಿರಿಯ ನಟ ಅಮಿತಾಭ್ ಮತ್ತು ಅವರ ಮಗ ಅಭಿಷೇಕ್‌ ಬಚ್ಚನ್‌‌ ಮುಂಬೈನ ನಾನಾವತಿ ಆಸ್ಪತ್ರೆ ಸೇರಿ ಎಂಟು ದಿನಗಳಾಯಿತು. ಹೋಂ ಕ್ವಾರಂಟೈನ್‌ನಲ್ಲಿದ್ದ ಐಶ್ವರ್ಯ ಮತ್ತು ಎಂಟು ವರ್ಷದ ಆರಾಧ್ಯ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆತಂಕ ಬೇಡ:ಎಲ್ಲರೂ ಕ್ಷೇಮ

‘ಬಚ್ಚನ್‌ ಕುಟುಂಬಐಸೊಲೇಷನ್‌ ವಾರ್ಡ್‌ನಲ್ಲಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೂ ಒಂದೆರೆಡು ದಿನಗಳಲ್ಲಿ ಸೀನಿಯರ್‌ ಮತ್ತು ಜೂನಿಯರ್‌ ಬಚ್ಚನ್ ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕೋವಿಡ್‌–19 ಸೋಂಕು ದೃಢಪಟ್ಟ ವಾರದ ನಂತರವೂ ಕೆಮ್ಮು ಕಡಿಮೆಯಾಗದ ಕಾರಣ ಐಶ್ವರ್ಯ ರೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಕೆಮ್ಮು ಕಡಿಮೆಯಾಗಿದ್ದು, ಮಗಳೊಂದಿಗೆ ಇನ್ನೂ ಸ್ವಲ್ಪ ದಿನ ಅವರು ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರೀತಿಗೆ ಶರಣು

‘ನಮ್ಮ ಕುಟುಂಬದ ಆರೋಗ್ಯಕ್ಕಾಗಿಮಂದಿರ, ಮಸೀದಿ, ಚರ್ಚ್‌, ಗುರುದ್ವಾರಗಳಲ್ಲಿ ನೀವು ಸಲ್ಲಿಸುತ್ತಿರುವ ಪ್ರಾರ್ಥನೆಗಳು ಕೇಳುತ್ತಿವೆ. ನಿಮ್ಮ ಈ ಪ್ರೀತಿಗೆ ಶರಣು’ ಎಂದು ಕೈಜೋಡಿಸಿರುವ ಇಮೋಜಿ ಹಾಕಿ‘ಬಿಗ್‌ ಬಿ’ ಧನ್ಯವಾದ ಸಲ್ಲಿಸಿದ್ದಾರೆ. ಇದರ ಜೊತೆ ಪ್ರಾರ್ಥನೆಗಿರುವ ಅಗಾಧ ಶಕ್ತಿ ಕುರಿತು ತಮ್ಮ ಬ್ಲಾಗ್‌ನಲ್ಲಿ ಅವರು ಪುಟ್ಟ ಭಾವನಾತ್ಮಕ ಟಿಪ್ಪಣಿಯನ್ನೂ ಬರೆದಿದ್ದಾರೆ.

ಏಕಾಂಗಿ ಅಲ್ಲ, ನಿಮ್ಮ ಪ್ರೀತಿಯೇ ಟಾನಿಕ್‌

‘ಈ ಹೋರಾಟದಲ್ಲಿ ನಾವು ಏಕಾಂಗಿ ಅಲ್ಲ.ನೀವು ತೋರಿಸುತ್ತಿರುವ ಪ್ರೀತಿಯೇ ನಮಗೆ ಟಾನಿಕ್‌. ಈ ಸಂಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದೀರಿ. ನೀವೆಲ್ಲಾ ನಮ್ಮೊಂದಿಗೆ ಇದ್ದೀರಿ ಎಂಬ ಸಂಗತಿಯೇ ನಮ್ಮ ಉತ್ಸಾಹ ಮತ್ತು ಶಕ್ತಿಯನ್ನು ಇಮ್ಮಡಿಗೊಳಿಸುತ್ತಿದೆ. ನೀವು ತೋರುತ್ತಿರುವ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವೇ? ಬರೀ ಕೃತಜ್ಞತೆಯಿಂದ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಕೃತಜ್ಞತೆ ಪದ ತೀರಾ ಸಣ್ಣದಾಗಿ ಬಿಡುತ್ತದೆ. ನಿಮೆಗೆಲ್ಲ ಹೃದಯ ತುಂಬಿದ ಕೃತಜ್ಞತೆ ಸಲ್ಲಿಸುವುದನ್ನು ಬಿಟ್ಟು ಸದ್ಯದ ಸಮಯದಲ್ಲಿ ನನ್ನಿಂದ ಮತ್ತಿನ್ನೇನು ಮಾಡಲು ಸಾಧ್ಯ. ನಾನು ಸಲ್ಲಿಸುತ್ತಿರುವ ಕೃತಜ್ಞತೆ ಕೇವಲ ಅಕ್ಷರಗಳಲ್ಲಿ ಪೋಣಿಸಿದ ಪದಗಳ ಸಾಲುಗಳಲ್ಲ. ಅದರಲ್ಲಿ ನನ್ನ ಬೆಚ್ಚನೆಯ ಭಾವನೆಗಳಿವೆ, ಅಪಾರ ಪ್ರೀತಿ ತುಂಬಿದೆ’ ಎಂದು ‘ಬಿಗ್‌ ಬಿ’ ಭಾವುಕರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸೀನಿಯರ್‌ ಬಚ್ಚನ್‌, ಕೊರೊನಾ ಸೋಂಕು ದೃಢಪಟ್ಟ ನಂತರ ತಮ್ಮ ಆರೋಗ್ಯ ಮತ್ತು ಆಸ್ಪತ್ರೆಯ ಬೆಳವಣಿಗೆಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.