ADVERTISEMENT

ಸಿನಿಮಾ | ಅಡುಗೆ ಮುಗಿಸಿದ ‘ಶೆಫ್‌ ಚಿದಂಬರ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 22:30 IST
Last Updated 12 ಅಕ್ಟೋಬರ್ 2023, 22:30 IST
ರೆಚೆಲ್ ಡೇವಿಡ್, ಅನಿರುದ್ಧ್‌, ನಿಧಿ ಸುಬ್ಬಯ್ಯ
ರೆಚೆಲ್ ಡೇವಿಡ್, ಅನಿರುದ್ಧ್‌, ನಿಧಿ ಸುಬ್ಬಯ್ಯ   

ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, ‘ರಾಘು’ ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್. ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

‘ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹಾಸ್ಯಮಯ ಚಿತ್ರ. ಅನಿರುದ್ಧ್ ಅವರು ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ’ ಎಂದರು ನಿರ್ದೇಶಕ ಆನಂದರಾಜ್‌.

ಇಪ್ಪತ್ತೊಂಬತ್ತು ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಈ ಚಿತ್ರದ ಚಿತ್ರೀಕರಣ ನಡೆದಿದೆ.‘ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಬಾಣಸಿಗನ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ’ ಎಂದರು ನಾಯಕ ಅನಿರುದ್ಧ್ ಜತಕರ್.

ADVERTISEMENT

‘ನಾನು ಈವರೆಗೂ ಮಾಡಿರದ ಪಾತ್ರವನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ.

‘ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹೇಗಿರಲಿದೆ ಎಂಬುದನ್ನು ನೀವು ಚಿತ್ರದಲ್ಲಿಯೇ ನೋಡಬೇಕು. ಅಷ್ಟು ಸೊಗಸಾದ ಪಾತ್ರವಿದು’ ಎಂದರು ರೆಚೆಲ್ ಡೇವಿಡ್.

ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.