
ಬೆಂಗಳೂರು: ‘ತಾವು ಇಚ್ಛಿಸಿದ ರೀತಿಯಲ್ಲಿ ಸಿನಿಮಾಗಳನ್ನು ಮಾಡಲು ಸಾಧ್ಯವಾಗದೇ ಇರುವುದು ಭಾರತದ ನಿರ್ದೇಶಕನಿಗೆ ಪ್ರಸ್ತುತ ಇರುವ ದೊಡ್ಡ ಭಯ’ ಎಂದು ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದರು.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶನಿವಾರ ನಡೆದ ‘ಫಿಯರ್ಲೆಸ್ ಫಿಲ್ಮ್ ಮೇಕಿಂಗ್’ ಸಂವಾದದಲ್ಲಿ ಅವರು ಮಾತನಾಡಿದರು. ಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಸಂವಾದ ನಡೆಸಿಕೊಟ್ಟರು.
‘ಭಾಷೆ, ಪಾತ್ರಗಳ ಧರ್ಮದ ಕಾರಣದಿಂದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೆ’ಯಂಥ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ‘ಗ್ಯಾಂಗ್ಸ್ ಆಫ್ ವಾಸೇಪುರ್’ನಲ್ಲಿ ಹೀರೊಗಳು ಮುಸ್ಲಿಂ ಆಗಿದ್ದರು, ಖಳನಾಯಕ ಹಿಂದೂವಾಗಿದ್ದ. ಇದು ಈಗ ಒಂದು ಸಮಸ್ಯೆಯಾಗಲಿದೆ. ಇರಾನ್ ಅಥವಾ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ಹೆಚ್ಚಿನ ನಿರ್ಬಂಧಗಳ ನಡುವೆಯೂ ಉತ್ತಮ ಸಿನಿಮಾ ಮಾಡುತ್ತಿದ್ದಾರೆ. ಇದು ಸ್ಫೂರ್ತಿಯಾಗಬೇಕು’ ಎಂದರು.
‘ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಧೈರ್ಯಶಾಲಿ ಮುಖ್ಯವಾಹಿನಿ ಚಿತ್ರಕ್ಕೆ ಉತ್ತಮ ಉದಾಹರಣೆ. ನನಗೆ ಈ ಸಿನಿಮಾ ಇಷ್ಟವಾಯಿತು, ಆದರೆ ಕೆಲವು ಸಿದ್ಧಾಂತಗಳು ಇಷ್ಟವಾಗಲಿಲ್ಲ’ ಎಂದರು.
ಕನ್ನಡದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಮಾತನಾಡಿದ ಅವರು, ‘ಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ’ ಎಂದರು.
ಲೇಖಕ ವಿವೇಕ ಶಾನಭಾಗ ಅವರ ‘ಘಾಚರ್ ಘೋಚರ್’ ಕಾದಂಬರಿಯನ್ನು ಆಧರಿಸಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಅನುರಾಗ್ ಹೇಳಿದರು. ಚಿತ್ರವು ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದೆ ಹಿಂದಿಯಲ್ಲೂ ಬರಲಿದೆ. ಇದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.