‘ಅರುಂಧತಿ’, ‘ಬಾಹುಬಲಿ’, ’ರುದ್ರಮದೇವಿ’, ‘ವೇದಂ’, ‘ಸೈಜ್ ಜೀರೊ’, ‘ಭಾಗಮತಿ’ ಸಿನಿಮಾಗಳಲ್ಲಿನ ಅನುಷ್ಕಾ ಶೆಟ್ಟಿಯ ನಟನೆಗೆ ಮನಸೋಲದವರು ವಿರಳ. ಆಕೆಯ ಮನೋಜ್ಞ ನಟನೆಯು ಅಭಿಮಾನಿಗಳ ಸಂಖ್ಯೆಯನ್ನೂ ದುಪ್ಪಟ್ಟುಗೊಳಿಸಿದೆ. ಮತ್ತೊಂದೆಡೆ ಆಕೆ ಮಹಿಳಾ ಕೇಂದ್ರಿತ ಸಿನಿಮಾಗಳಲ್ಲಿ ನಟನೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.
ಈ ನಡುವೆಯೇ ಆಕೆ ತೆಲುಗಿನ ಮಹಿಳಾ ಕೇಂದ್ರಿತ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಹೊಸ ನಿರ್ದೇಶಕರೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಆದರೆ, ಇನ್ನೂ ಅವರ ಹೆಸರು ಬಹಿರಂಗಗೊಂಡಿಲ್ಲ.
ಆಕೆ ಇಲ್ಲಿಯವರೆಗೂ ಇಂತಹ ಪಾತ್ರದಲ್ಲಿ ನಟಿಸಿಲ್ಲವಂತೆ. ಆಕೆಯ ವೃತ್ತಿಬದುಕಿನಲ್ಲಿಯೇ ವಿಶೇಷವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯಿದೆ. ಅಂದಹಾಗೆ ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆಯು ಅಂತಿಮಗೊಂಡಿಲ್ಲ. ಇದಕ್ಕೆ ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡಲಿದೆ. ಶೀಘ್ರವೇ, ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿರುವ ಅನುಷ್ಕಾ ನಟನೆಯ ಬಹುನಿರೀಕ್ಷಿತ ನಿಶ್ಯಬ್ದಂ’ ಚಿತ್ರವೂ ಬಿಡುಗಡೆಯ ಹಂತದಲ್ಲಿದೆ. ಕೊರೊನಾ ಭೀತಿ ಕಾಣಿಸಿಕೊಳ್ಳಲಿದ್ದರೆ ಈಗಾಗಲೇ ಇದು ಬಿಡುಗಡೆಯಾಗಬೇಕಿತ್ತು. ಇದಕ್ಕೆ ತಮಿಳಿನಲ್ಲಿ ‘ಸೈಲೆಂಟ್’ ಎಂಬ ಶೀರ್ಷಿಕೆ ಇಡಲಾಗಿದೆ. ಇದನ್ನು ನಿರ್ದೇಶಿಸಿರುವುದು ಹೇಮಂತ್ ಮಧುಕರ್. ಮಾಧವನ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.