ADVERTISEMENT

ಬೆಂಗಳೂರು ಚಲನಚಿತ್ರೋತ್ಸವದಲ್ಲಿ ನಿರ್ಮಾಪಕ ಕುಮಾರ್ ಮೇಲೆ ಅಶೋಕ್‌ ಕಶ್ಯಪ್‌ ಹಲ್ಲೆ?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 11:09 IST
Last Updated 27 ಮಾರ್ಚ್ 2023, 11:09 IST
ಅಶೋಕ್‌ ಕಶ್ಯಪ್‌, ಕುಮಾರ ಶ್ರೀನಿವಾಸ್‌
ಅಶೋಕ್‌ ಕಶ್ಯಪ್‌, ಕುಮಾರ ಶ್ರೀನಿವಾಸ್‌   

ಬೆಂಗಳೂರು: ನಗರದ ಒರಾಯನ್‌ ಮಾಲ್‌ನಲ್ಲಿ ನಡೆಯುತ್ತಿರುವ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರೀಲ್‌ ಬದಲು ರಿಯಲ್‌ ಫೈಟ್‌ ನಡೆದಿದೆ. ನಿರ್ಮಾಪಕ ಕುಮಾರ್‌ ಶ್ರೀನಿವಾಸ್‌ ಅವರ ಮೇಲೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯೇನು?

ತಮ್ಮ ಮೇಲಾದ ಹಲ್ಲೆ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕುಮಾರ್‌, ‘ಮಾರ್ಚ್ 25ರ ಸಂಜೆ 6.50 ರಿಂದ 7.10 ಗಂಟೆ ವೇಳೆ ಈ ಘಟನೆ ನಡೆದಿದೆ. ಒರಾಯಾನ್‌ ಮಾಲ್‌ನಲ್ಲಿರುವ ಚಿತ್ರೋತ್ಸವದ ಕಚೇರಿ ಎದುರು ಏನೋ ಕೇಳಲೆಂದು ಹೋಗಿದ್ದೆ. ಆಗ ಕಶ್ಯಪ್‌ ಅವರು ಅವಾಚ್ಯ ಪದಗಳಿಂದ ನಿಂದಿಸಿ ಬೆನ್ನು, ಭುಜದ ಮೇಲೆ ಹೊಡೆದರು. ನಿಮ್ಮನ್ನು ಒಳಗೆ ಬಿಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ನಾನು ಸ್ಥಳದಿಂದ ದೂರವಾಗಿ ಪಾರಾದೆ’ ಎಂದು ಕುಮಾರ್‌ ಹೇಳಿಕೊಂಡಿದ್ದಾರೆ.

ADVERTISEMENT

‘ಘಟನೆ ನಡೆದ ತಕ್ಷಣ ಅಲ್ಲಿಗೆ ಬಂದ ಚಿತ್ರರಂಗದ ಹಿರಿಯರು, ಚಿತ್ರೋತ್ಸವ ನಡೆಯುತ್ತಿದೆ. ಅದಕ್ಕೆ ಕಳಂಕ ಬರಬಾರದು ಸಂಧಾನದ ಯತ್ನ ಮಾಡಿದ್ದಾರೆ. ಈ ವಿಚಾರವಾಗಿ ಇಂದು ಕಾನೂನು ಹೋರಾಟ ಮಾಡುತ್ತೇನೆ. ಇಂದು (ಸೋಮವಾರ) ದೂರು ನೀಡುತ್ತೇನೆ’ ಎಂದು ಕುಮಾರ್‌ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಅಶೋಕ್‌ ಕಶ್ಯಪ್‌ ಅವರು ಮೊಬೈಲ್‌ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.