
ಅಭಿಷೇಕ್ ಎಂ. ನಿರ್ದೇಶನದ ಚೊಚ್ಚಲ ಸಿನಿಮಾ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ನ.21ರಂದು ತೆರೆಕಾಣುತ್ತಿದ್ದು, ಇತ್ತೀಚೆಗೆ ನಟ ಶ್ರೀಮುರಳಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಬ್ಯಾಂಕ್ ದರೋಡೆಯ ಕಥೆಯಿರುವ ಈ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿದ್ದಾರೆ.
‘ಸ್ನೇಹಿತರ ಜೊತೆಗೂಡಿ ‘ಪಿನಾಕ’ ಎಂಬ ವಿ.ಎಫ್.ಎಕ್ಸ್ ಸ್ಟುಡಿಯೊ ನಡೆಸುತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ’ ಎಂದು ಮಾತು ಆರಂಭಿಸಿದ ಅಭಿಷೇಕ್, ‘ಕೋವಿಡ್ ಸಂದರ್ಭದಲ್ಲಿ ಕಿರುಚಿತ್ರ ಮಾಡಲೆಂದು ಬರೆದ ಕಥೆ ಇದಾಗಿತ್ತು. ನಂತರದಲ್ಲಿ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎನಿಸಿತು. ನಿರ್ಮಾಪಕ ಎಚ್.ಕೆ.ಪ್ರಕಾಶ್ ಅವರು ಕಥೆ ಮೆಚ್ಚಿಕೊಂಡ ನಂತರ ಸಿನಿಮಾ ರೂಪ ಪಡೆದಿದೆ’ ಎಂದರು.
‘ನನ್ನ ‘ದಿಯಾ’ ಹಾಗೂ ‘ಬ್ಲಿಂಕ್’ ಸಿನಿಮಾಗಳಿಗೆ ಸಿಕ್ಕ ಪ್ರೋತ್ಸಾಹ ಅಪಾರ. ಭಿನ್ನವಾದ ಜಾನರ್ಗಳ ಸಿನಿಮಾಗಳಲ್ಲಿ ನಟಿಸಬೇಕೆಂಬುದು ನನ್ನ ಆಸೆ. ಹಿಂದಿನ ಚಿತ್ರಗಳಿಗಿಂತ ಆಕರ್ಷಕ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ. ಚಿತ್ರ ಗೆಲ್ಲುವ ಭರವಸೆ ಇದೆ’ ಎಂದರು ದೀಕ್ಷಿತ್ ಶೆಟ್ಟಿ.
‘ನಿಮಗೆ ಯಾರು ಪೈಪೋಟಿ ಎಂದು ಎಲ್ಲರೂ ಕೇಳುತ್ತಿದ್ದರು. ನನಗೆ ನಾನೇ ಪೈಪೋಟಿ ಎಂದು ಹೇಳುವ ಸಮಯ ಬಂದಿದೆ. ಏಕೆಂದರೆ ನ.21ರಂದು ನಾನು ನಾಯಕಿಯಾಗಿ ನಟಿಸಿದ ಎರಡು ಸಿನಿಮಾಗಳು ತೆರೆಕಾಣುತ್ತಿವೆ. ಎರಡರಲ್ಲೂ ಭಿನ್ನವಾದ ಪಾತ್ರಗಳು’ ಎನ್ನುತ್ತಾರೆ ಬೃಂದಾ ಆಚಾರ್ಯ.
‘ರಂಗಿತರಂಗ’ ಸಿನಿಮಾ ನಿರ್ಮಾಣ ಮಾಡಿದ್ದ ಎಚ್.ಕೆ.ಪ್ರಕಾಶ್ ನಿರ್ಮಾಣ ಮಾಡಿರುವ ಆರನೇ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಸಾಧು ಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಶ್ರೀವತ್ಸ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ ಮುಂತಾದವರು ನಟಿಸಿದ್ದಾರೆ. ‘ಟೈಗರ್’ ಎನ್ನುವ ಪಾತ್ರದಲ್ಲಿ ದೀಕ್ಷಿತ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.