ADVERTISEMENT

ಆ ಕರೆ ಫೇಕ್‌ ಅಂದುಕೊಂಡಿದ್ದೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 19:30 IST
Last Updated 2 ಫೆಬ್ರುವರಿ 2020, 19:30 IST
‘ಬಿಚ್ಚುಗತ್ತಿ’ ಚಿತ್ರದಲ್ಲಿ ರಾಜವರ್ಧನ್
‘ಬಿಚ್ಚುಗತ್ತಿ’ ಚಿತ್ರದಲ್ಲಿ ರಾಜವರ್ಧನ್   

ಬಿ.ಎಲ್. ವೇಣು ಅವರ ಕಾದಂಬರಿ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಆಧರಿಸಿದ ಸಿನಿಮಾ ‘ಬಿಚ್ಚುಗತ್ತಿ’. ಇದರ ನಾಯಕ ರಾಜವರ್ಧನ್ (ಭರಮಣ್ಣ ನಾಯಕನ ಪಾತ್ರ). ರಾಜ್‌ಕುಮಾರ್‌ ಅವರ ಹೆಸರಿನ ಒಂಚೂರು, ವಿಷ್ಣುವರ್ಧನ್ ಅವರ ಹೆಸರಿನ ಇನ್ನೊಂಚೂರು ಭಾಗವನ್ನು ಜೋಡಿಸಿ ‘ರಾಜವರ್ಧನ್’ ಎಂಬ ಹೆಸರು ಸೃಷ್ಟಿಸಿದಂತಿದೆ.

‘ಬಿಚ್ಚುಗತ್ತಿ’ ಚಿತ್ರವು ಶೀಘ್ರದಲ್ಲೇ ತೆರೆಯ ಮೇಲೆ ಕಾಣಿಸಿಕೊಳ್ಳುವ ಹವಣಿಕೆಯಲ್ಲಿ ಇದೆ. ಈ ಚಿತ್ರದ ನಾಯಕನಾಗಿ ಅಭಿನಯಿಸಬೇಕು ಎಂಬ ಕರೆ ಬಂದಾಗ ರಾಜವರ್ಧನ್ ಅವರು ಇದೊಂದು ‘ಫೇಕ್‌ ಕರೆ’ ಎಂದು ಭಾವಿಸಿದ್ದರು. ಏಕೆಂದರೆ, ಅಂತಹ ಫೇಕ್‌ ಕರೆಗಳನ್ನು ಸ್ವೀಕರಿಸಿದ್ದ ಅನುಭವ ಅವರಿಗೆ ಅದಾಗಲೇ ಇತ್ತು.

‘ನಂತರ ಒಂದು ದಿನ ಹಂಸಲೇಖ ಅವರೇ ಕರೆ ಮಾಡಿ, ಈ ಚಿತ್ರಕ್ಕೆ ನೀನೇ ಹೀರೊ ಅಂದರು. ಆಗ ಖುಷಿಯಾಯಿತು. ನಂತರ ಹಂಸಲೇಖ ಅವರು ನನ್ನನ್ನು ಕರೆಸಿ, ಕಳರಿಪಯಟ್ಟು ಸೇರಿದಂತೆ ಒಂದಿಷ್ಟು ದೇಸಿ ಕಲೆಗಳನ್ನು ಕಲಿಯಲು ಹೇಳಿದರು. ಈ ಚಿತ್ರಕ್ಕಾಗಿ ನಾನು ಒಂದು ವರ್ಷ ತರಬೇತಿ ಪಡೆದಿದ್ದೇನೆ’ ಎಂದರು ರಾಜವರ್ಧನ್. ಇವರು ಖ್ಯಾತ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಮಗ.

ADVERTISEMENT

‘ಬಿಚ್ಚುಗತ್ತಿ’ಯ ಖಳನಾಯಕನಿಗೆ ಎದುರಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ರಾಜವರ್ಧನ್ ಅವರು ತಮ್ಮ ದೇಹದ ತೂಕವನ್ನು 80 ಕೆ.ಜಿ.ಯಿಂದ 108 ಕೆ.ಜಿ.ಗೆ ಹೆಚ್ಚಿಸಿಕೊಂಡರು. ಈ ಚಿತ್ರದಲ್ಲಿ ಅಭಿನಯಿಸುವ ವಿಚಾರವಾಗಿ ದರ್ಶನ್ ಅವರು ರಾಜವರ್ಧನ್ ಅವರಿಗೆ ಒಂದೆರಡು ಸಲಹೆಗಳನ್ನು ನೀಡಿದ್ದರು.

‘ಇದೇ ಮೊದಲ‌ ಸಿನಿಮಾ, ಇದೇ ಕೊನೆಯ ಸಿನಿಮಾ ಎಂಬ ಭಾವನೆಯಲ್ಲಿ ಕೆಲಸ ಮಾಡು. ಆಗ ಸಿನಿಮಾ ಕೆಲಸ ಚೆನ್ನಾಗಿ ಆಗುತ್ತದೆ ಎಂದಿದ್ದರು ದರ್ಶನ್’ ಎಂದು ನೆನಪಿಸಿಕೊಳ್ಳುತ್ತಾರೆ ರಾಜವರ್ಧನ್. ‘ನಾನು ಈ ಚಿತ್ರಕ್ಕಾಗಿ ನೂರಕ್ಕೆ ನೂರರಷ್ಟು ಶ್ರಮ ಹಾಕಿದ್ದೇನೆ. ಇದಕ್ಕಿಂತ ಹೆಚ್ಚು ಮಾಡಲು ನನ್ನಿಂದ ಆಗದು ಎಂಬಷ್ಟು ಕೆಲಸ ಮಾಡಿದ್ದೇನೆ’ ಎಂದರು ಬಿಚ್ಚುಗತ್ತಿಯ ಭರಮಣ್ಣ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.