ಮಂಡ್ಯ: ಮೈಸೂರು– ಬೆಂಗಳೂರು ನಡುವೆ ಪ್ರಯಾಣಿಸುವಾಗ ಶ್ರೀರಂಗಪಟ್ಟಣಕ್ಕೂ ಮೊದಲು ಸಿಗುವ ಬಾಬುರಾಯನಕೊಪ್ಪಲು ಜೈಭುವನೇಶ್ವರಿ ಹೋಟೆಲ್ಗೆ ಪುನೀತ್ ರಾಜ್ಕುಮಾರ್ ಆಗಾಗ ಭೇಟಿ ಕೊಡುತ್ತಿದ್ದರು. ತಲೆಮಾಂಸ ಹಾಗೂ ಕಾಲು ಸೂಪ್ ರುಚಿ ನೋಡಿಯೇ ಅವರು ಮುಂದಕ್ಕೆ ತೆರಳುತ್ತಿದ್ದರು.
ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೇ ಶೂಟಿಂಗ್ ನಡೆದರೂ ಜೈಭುವನೇಶ್ವರಿ ಹೋಟೆಲ್ನಿಂದ ತಲೆಮಾಂಸ ತರಿಸಿಕೊಂಡು ಸವಿಯುತ್ತಿದ್ದರು. ಬಾಬುರಾಯನಕೊಪ್ಪಲಿನ ಹೋಟೆಲ್ ಜೊತೆಗಿನ ಸಂಬಂಧ ಡಾ.ರಾಜ್ಕುಮಾರ್ ಅವರ ಕಾಲದಿಂದಲೂ ಇತ್ತು. ಹೋಟೆಲ್ ಸಣ್ಣ ಗುಡಿಸಲಿನ ಜಾಗದಲ್ಲಿದ್ದಾಗಲೂ ಡಾ.ರಾಜ್ ಅಲ್ಲಿಗೆ ಭೇಟಿ ನೀಡಿ ತಲೆ ಮಾಂಸ ಸವಿಯುತ್ತಿದ್ದರು. ಜೊತೆಯಲ್ಲಿ ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಿದ್ದರು. ಪುನೀತ್ ಕೂಡ ಆ ಹೋಟೆಲ್ ರುಚಿಯನ್ನು ಸದಾ ಸವಿಯುತ್ತಿದ್ದರು.
ಚಿಬ್ಲು ಇಡ್ಲಿ ರುಚಿ: ಹಲಗೂರು ಪಟ್ಟಣದಲ್ಲಿರುವ ಬಾಬು ಹೋಟೆಲ್ನ ಚಿಬ್ಲು ಇಡ್ಲಿ ಕೂಡ ಪುನೀತ್ಗೆ ಅಚ್ಚುಮೆಚ್ಚಾಗಿತ್ತು. ಶಿವರಾಜ್ಕುಮಾರ್ ಈ ಹೋಟೆಲ್ಗೆ ಹಲವು ಬಾರಿ ಬಂದಿದ್ದರು, ಬಂದಾಗಲೆಲ್ಲಾ ಪುನೀತ್ಗಾಗಿ ಇಡ್ಲಿ ಕಟ್ಟಿಸಿಕೊಂಡು ಹೋಗುತ್ತಿದ್ದರು. ಹೋಟೆಲ್ ಮಾಲೀಕ ಕೃಷ್ಣ ಅವರೇ ಹಲವು ಬಾರಿ ಚಿಬ್ಲು ಇಡ್ಲಿಯನ್ನು ಪುನೀತ್ಗೆ ಕೊಂಡೊಯ್ದು ಕೊಟ್ಟಿದ್ದರು.
‘ಮುತ್ತತ್ತಿಯಲ್ಲಿ ಅರಸು ಚಿತ್ರದ ಚಿತ್ರೀಕರಣದ್ದಲ್ಲಿದ್ದಾಗ ಇಡ್ಲಿ ಕೊಟ್ಟು ಬಂದಿದ್ದೆ. ಈ ಥರದ ಇಡ್ಲಿ ಎಲ್ಲೂ ಸಿಗುವುದಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಕಳೆದ ವಾರ ಬೆಂಗಳೂರಿಗೆ ತೆರಳಿ ಅಪ್ಪುವನ್ನು ಭೇಟಿಯಾಗಿದ್ದೆ, ಶೀಘ್ರ ಹೋಟೆಲ್ಗೆ ಬರುವುದಾಗಿ ತಿಳಿಸಿದ್ದರು’ ಎಂದು ಕೃಷ್ಣ ಕಣ್ಣೀರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.