ADVERTISEMENT

ಟೆಲಿಗ್ರಾಂ ಮೇಲೆ ಕಡಿವಾಣ ಹಾಕಿ: ಬಣಕಾರ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 7:17 IST
Last Updated 16 ಡಿಸೆಂಬರ್ 2020, 7:17 IST
ಉಮೇಶ್‌ ಬಣಕಾರ್‌
ಉಮೇಶ್‌ ಬಣಕಾರ್‌   

ಬೆಂಗಳೂರು:ಟೆಲಿಗ್ರಾಂ ಅಪ್ಲಿಕೇಷನ್‌ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ರೀತಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇದು ಚಿತ್ರರಂಗಕ್ಕೆ ಮಾರಕವಾಗಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್ ಒತ್ತಾಯಿಸಿದರು.

‘ಪೈರಸಿ ತಡೆ ಸಂಬಂಧಿಸಿದಂತೆ ನಾವು ಎಲ್ಲ ಸರ್ಕಾರಗಳಿಗೂ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಸರಿಯಾಗಿ ಜಾರಿಯಾಗಿಲ್ಲ. ಈಗ ಮತ್ತೊಮ್ಮೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ. ಇನ್ನಾದರೂ ಸರ್ಕಾರ ಕ್ರಮ ಕೈಗೊಳ್ಳಲಿʼ ಎಂದು ಅವರು ಒತ್ತಾಯಿಸಿದರು.

ʼಪೈರಸಿ ಇಂದು ನಿನ್ನೆಯ ಸಮಸ್ಯೆ ಅಲ್ಲ. ಕ್ಯಾಸೆಟ್‌, ಸಿಡಿ, ಡಿವಿಡಿಗಳ ಕಾಲದಿಂದಲೂ ಇತ್ತು. ಈಗ ಡಿಜಿಟಲ್‌ ವ್ಯವಸ್ಥೆ ಬಂದ ಮೇಲೆ ಕ್ಷಣದಲ್ಲೇ ಕೋಟ್ಯಂತರ ಪ್ರತಿಗಳನ್ನು ಮಾಡಬಹುದು. ಮೈಸೂರು ಹಾಗೂ ಬೆಂಗಳೂರಿನಲ್ಲಿ ನೇರವಾಗಿ ದಾಳಿ ನಡೆಸಿ ಪೈರಸಿಕೋರರನ್ನು ಪೊಲೀಸರಿಗೆ ಹಿಡಿದುಕೊಟ್ಟೆವು. ಆದರೂ ಅವರ ವಿರುದ್ಧ ಗೂಂಡಾ ಕಾಯ್ದೆಯ ಅಡಿ ಸೂಕ್ತ ಕಲಂಗಳನ್ನು ಅನ್ವಯಿಸಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಮಾಡಲಿಲ್ಲ’ ಎಂದರು.

ADVERTISEMENT

‘ವಾಟ್ಸ್‌ ಆಪ್‌ನಲ್ಲೂ ಪೈರಸಿ ಪ್ರತಿಗಳನ್ನು ರವಾನಿಸಲು ಸಾಧ್ಯವಿದೆಯಲ್ಲಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಣಕಾರ್‌, ‘ವಾಟ್ಸ್‌ ಆಪ್‌ಗೆ ಹೋಲಿಸಿದರೆ ಟೆಲಿಗ್ರಾಂಗೆ ಚಂದಾದಾರರು ತುಂಬಾ ಇದ್ದಾರೆ. ಇದರ ಮೂಲಕವೇ ಅತಿ ಹೆಚ್ಚು ವಿಡಿಯೋಗಳು ಪ್ರಸಾರವಾಗುತ್ತಿರುವುದು, ಯುಟ್ಯೂಬ್‌ಗೆ ಅಪ್‌ಲೋಡ್‌ ಆಗುತ್ತಿರುವುದು ನಡೆಯುತ್ತಲೇ ಇದೆ. ನಾನು ಕನ್ನಡ ಚಿತ್ರರಂಗದ ಬಗೆಗಷ್ಟೇ ಮಾತನಾಡುತ್ತಿಲ್ಲ. ಭಾರತೀಯ ಚಿತ್ರರಂಗವೇ ಪೈರಸಿಯಿಂದಾಗಿ ತತ್ತರಿಸಿದೆ. ಹೀಗಾದರೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕನ ಗತಿ ಏನು’ ಎಂದು ಪ್ರಶ್ನಿಸಿದರು.

‘ಟೆಲಿಗ್ರಾಂ ಅಪ್ಲಿಕೇಷನನ್ನು ಕೇಂದ್ರ ಸರ್ಕಾರ‌ ನಿಯಂತ್ರಿಸದಿದ್ದಲ್ಲಿನಮ್ಮ ರಾಜ್ಯಸಭಾ ಸದಸ್ಯರು, ಸಂಸದರು ಒತ್ತಡ ಹೇರಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.