ADVERTISEMENT

ಕುತೂಹಲ ಹೆಚ್ಚಿಸಿದ ದರ್ಶನ್‌ ಓಪನ್‌ ಚಾಲೆಂಜ್‌?

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 7:05 IST
Last Updated 2 ಜುಲೈ 2019, 7:05 IST
   

‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್‌ಬುಕ್‌ ಲೈವ್ ಬರ್ತೀನಿ. ಬಂದಾಗ ಎಲ್ಲಾನು ತಿಳಿಸುತ್ತೇನೆ...’

ಹೀಗೆಂದು ‘ಚಾಲೆಂಜಿಗ್‌ ಸ್ಟಾರ್‌’ ದರ್ಶನ್‌ ಚಾಲೆಂಜ್‌ ಹಾಕಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಅಭಿಮಾನಿಗಳು ದರ್ಶನ್‌ ಅವರ ಬರಹಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ, ದಚ್ಚು ಓಪನ್‌ ಚಾಲೆಂಜ್‌ ಹಾಕಿರುವುದು ಯಾರಿಗೆ ಎನ್ನುವುದು ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ. ಈಗ ಮತ್ತೊಂದು ಟ್ವೀಟ್‌ ಮಾಡಿರುವ ದರ್ಶನ್‌ ಮಧ್ಯಾಹ್ನ 1 ಗಂಟೆಗೆ ಈ ಚಾಲೆಂಜ್‌ ಎಂದು ಹೇಳಿದ್ದಾರೆ.

ADVERTISEMENT

ದರ್ಶನ್‌ ಯಾವುದೇ ಚಿತ್ರೀಕರಣಕ್ಕೆ ಹೋಗುವ ಮೊದಲು ಬೆಳಿಗ್ಗೆಯೇ ಜಿಮ್‌ನಲ್ಲಿ ಒಂದೂವರೆ ಗಂಟೆಕಾಲ ಕಸರತ್ತು ನಡೆಸುತ್ತಾರೆ. ಅವರು ಫಿಟ್ನೆಸ್‌ನಲ್ಲಿ ದೈತ್ಯ ಎಂದು ಎಲ್ಲರಿಗೂ ಗೊತ್ತು. ಅವರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸವಾಲು ನೀಡುತ್ತಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಅಭಿಮಾನಿಗಳು ಮುಳುಗಿದ್ದಾರೆ. ಈ ಹಿಂದೆ ಅವರು ಸ್ನೇಹಿತರಾದ ಸೃಜನ್‌, ವಿನೋದ್‌ ಪ್ರಭಾಕರ್‌ಗೆ ಇಂತಹ ಸವಾಲು ನೀಡಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಪರೋಕ್ಷವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ, ಜೆಡಿಎಸ್‌ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸವಾಲು ಎಸೆದಿದ್ದು ಉಂಟು.

‘ತಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಹಸು ಕರು ಹಾಕಿದಾಗ ಏನು ಆಹಾರ ಕೊಡಬೇಕು ಎಂದು ಹೇಳಲಿ. ಒಂದು ಲೋಟ ಹಾಲು ಕರೆದು ತೋರಿಸಲಿ’ ಎಂದು ಓಪನ್‌ ಚಾಲೆಂಜ್ ಮಾಡಿದ್ದರು.

ಅಂದಹಾಗೆ ‘ಮುನಿರತ್ನ ಕುರುಕ್ಷೇತ್ರ’ದ ಚಿತ್ರದ ಆಡಿಯೊ ಬಿಡುಗಡೆ ಜುಲೈ 7ರಂದು ನಡೆಯಲಿದೆ. ಕಾರ್ಯಕ್ರಮದ ಪಾಸ್‌ಗಳಲ್ಲಿ ಕಲಾವಿದರ ಫೋಟೊ ಮುದ್ರಿಸಿಲ್ಲ ಎಂದು ದರ್ಶನ್‌ ಅಭಿಮಾನಿಗಳ ಬೇಸರ ತೋಡಿಕೊಂಡಿದ್ದಾರೆ.

ಈ ನಡುವೆಯೇ ಚಿತ್ರದ ಮುಖ್ಯ ನಟರೊಬ್ಬರು ಇನ್ನೂ ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿಲ್ಲ ಎನ್ನಲಾಗಿದೆ. ಈ ಚಿತ್ರ ಕುರಿತಾಗಿ ದಚ್ಚು ಸವಾಲು ಹಾಕುತ್ತಿರಬಹುದೇ ಎನ್ನುವ ಚರ್ಚೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.