
ನಟ ಧನ್ವೀರ್
ಚಿತ್ರ: ಇನ್ಸ್ಟಾಗ್ರಾಂ
ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಅಭಿನಯದ ‘ಹಯಗ್ರೀವ’ ಸಿನಿಮಾ ಇಂದು (ಫೆ.27) ಬೆಳಿಗ್ಗೆ 10:30ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆಯು ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋಗಳು ರಾಜ್ಯದಾದ್ಯಂತ ಸಾಮೂಹಿಕವಾಗಿ ರದ್ದಾಗಿವೆ. ಬದಲಾಗಿ ಸಂಜೆ 4:30ಕ್ಕೆ ರಾಜ್ಯದಾದ್ಯಂತ ಆರಂಭಗೊಳ್ಳಲಿವೆ.
ಈಗಾಗಲೇ ‘ಹಯಗ್ರೀವ’ ಚಿತ್ರತಂಡ ಸಿನಿಮಾದ ಕುರಿತು ಚಿತ್ರತಂಡ ಸಾಕಷ್ಟು ಪ್ರಚಾರ ಮಾಡಿದೆ. ಮಾತ್ರವಲ್ಲ, ನಟ ದರ್ಶನ್ ಅವರ ಖಾತೆಯಿಂದ ‘ಹಯಗ್ರೀವ’ ಸಿನಿಮಾದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇದೀಗ ಸಿನಿಮಾಕ್ಕೆ ಮೊದಲ ಹಂತದಲ್ಲೇ ವಿಘ್ನ ಎದುರಾಗಿದೆ.
ಸಿನಿಮಾ ಬಿಡುಗಡೆ ವಿಳಂಬದ ಕುರಿತು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಾರಣಾಂತರಗಳಿಂದ ಹಯಗ್ರೀವ ಚಿತ್ರದ ಮೊದಲ ದಿನದ (ಶುಕ್ರವಾರ) ಬೆಳಿಗ್ಗೆ 10:30 ಶೋ ಹಾಗೂ ಮಧ್ಯಾಹ್ನ 1:30 ಶೋ ಇರುವುದಿಲ್ಲ. ಬದಲಾಗಿ ಸಂಜೆ 4.30ರಿಂದ ಕರ್ನಾಟಕ ರಾಜ್ಯದಾದ್ಯಂತ ನಮ್ಮ ಹಯಗ್ರೀವ ಚಿತ್ರದ ಪ್ರದರ್ಶನಗಳು ಅದ್ಧೂರಿಯಾಗಿ ಪ್ರಾರಂಭವಾಗುತ್ತದೆ. ನೋಡಿ ಹರಸಿ ಬೆಂಬಲಿಸಿ’ ಎಂದು ಬರೆದುಕೊಂಡಿದ್ದಾರೆ.
ಸಮೃದ್ಧಿ ಮಂಜುನಾಥ್ ತಮ್ಮ ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಹಯಗ್ರೀವ ಚಿತ್ರಕ್ಕೆ ರಘುಕುಮಾರ್ ಒ.ಆರ್. ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬಿಗ್ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ ಕೂಡ ನಟಿಸಿದ್ದಾರೆ.
‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.