
ಮುಂಬೈ: ಹಿರಿಯ ನಟ ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲಾಗಿದೆ. ಇನ್ನುಮುಂದೆ ಅವರ ಚಿಕಿತ್ಸೆಯು ಮನೆಯಲ್ಲಿಯೇ ಮುಂದುವರಿಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಧರ್ಮೇಂದ್ರ ಅವರು ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿದ್ದರು.
ನಟ, ಸ್ನೇಹಿತ ಅಮಿತಾಬ್ ಬಚ್ಚನ್ ಅವರು ಧರ್ಮೇಂದ್ರ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ‘ಕುಟುಂಬದ ಖಾಸಗೀತನವನ್ನು ಗೌರವಿಸಿ’ ಎಂದು ಧರ್ಮೇಂದ್ರ ಅವರ ಕುಟುಂಬವು ಮಾಧ್ಯಮ ಮತ್ತು ಸಾರ್ವಜನಿಕರಿಲ್ಲಿ ಮನವಿ ಮಾಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕುಟುಂಬ, ‘ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾರೂ ಊಹಾಪೋಹಗಳನ್ನು ನಂಬಬೇಡಿ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆಗೆ ನಾವು ಆಭಾರಿಗಳಾಗಿದ್ದೇವೆ. ಅವರು ನಿಮ್ಮನ್ನು ಬಹಳ ಪ್ರೀತಿಸುತ್ತಾರೆ. ಅದಕ್ಕಾಗಿ ನೀವು ಅವರಿಗೆ ಗೌರವ ನೀಡಿ’ ಎಂದು ಹೇಳಿದೆ.
ಪ್ರಜ್ಞೆ ತಪ್ಪಿ ಬಿದ್ದ ನಟ ಗೋವಿಂದ: ಬುಧವಾರ ಮನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ನಟ ಗೋವಿಂದ ಅವರನ್ನು ಅಂಧೇರಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಬಳಿಕ, ಅವರನ್ನು ಅದೇ ದಿನವೇ ಮನೆಗೆ ಕಳುಹಿಸಲಾಗಿದೆ.
‘ನಾನು ಈಗ ಆರಾಮಾಗಿದ್ದೇನೆ. ನಾನು ತುಸು ಹೆಚ್ಚು ವರ್ಕ್ಔಟ್ ಮಾಡಿದೆ. ಅದಕ್ಕಾಗಿ ಹೀಗಾಗಿದೆ. ನಮ್ಮ ದೇಹವನ್ನು ಹದವಾಗಿಟ್ಟುಕೊಳ್ಳಲು ಯೋಗ ಮತ್ತು ಪ್ರಣಾಯಾಮವೇ ಉತ್ತಮ ಮಾರ್ಗಗಳು. ಆದ್ದರಿಂದ ಇದನ್ನೇ ಅಭ್ಯಾಸ ಮಾಡುವುದನ್ನು ಮುಂದುವರಿಸುತ್ತೇನೆ’ ಎಂದು ನಟ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.