ಕನ್ನಡದಲ್ಲಿ ಮಾಟ–ಮಂತ್ರ ಆಧಾರಿತ ಚಿತ್ರಗಳು ತೀರಾ ವಿರಳ. ದಶಕಗಳ ಹಿಂದೆ ಏಟು–ಎದಿರೇಟು, ಈಚೆಗೆ ಕಟಕದಂಥ ಸಿನಿಮಾಗಳು ಬಂದಿದ್ದವು. ಬಹಳ ದಿನಗಳ ನಂತರ ಇಂಥದ್ದೆ ಎಳೆ ಇರುವ ಚಿತ್ರವೊಂದು ಸೆಟ್ಟೇರಿದೆ.ಅದುವೇ ದಿಗ್ಲುಪುರ.
ಈಚೆಗೆ ಕಂಠೀರವ ಸ್ಟುಡಿಯೊದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿದರು. ‘ದ ಡೆಡ್ ವಾಕ್ ಇನ್ ಸ್ಕೇರಿ ವಿಲೇಜ್’ ಎಂಬ ಅಡಿಬರಹ ಇರೋ ಈ ಚಿತ್ರಕ್ಕೆ ಮನೋಜ್ಞ ಮನ್ವಂತರ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ರೇರ್ ವಿಜನ್ ಮೂವೀ ಮೇಕರ್ಸ್ ಮೂಲಕ ಆರ್.ವಿ.ಎಂ.ಎಂ. ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ರಮೇಶ್ ಪಂಡಿತ್, ಲಯ ಕೋಕಿಲ, ಫರ್ದಿನ್ ಅಹ್ಮದ್ ಪ್ರಮುಖ
ಪಾತ್ರಗಳಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಮನೋಜ್ಞ ಮನ್ವಂತರ, ‘ ಒಂದೊಳ್ಳೆ ಕಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಿದರೆ ಗೆಲುವು ಖಂಡಿತ. ಕಂಡು ಕೇಳಿದ ಕಾಲ್ಪನಿಕ ವಿಷಯ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಭಯ ಅಂದರೇನು?, ಅದರ ಸ್ವರೂಪ ಹೇಗಿರುತ್ತೆ?, ಮನುಷ್ಯ ಸತ್ತರೂ ಆತನ ಆಲೋಚನೆಗಳು ಸಾಯಲ್ಲ ಅನ್ನುವುದೇ ಚಿತ್ರದ ಮೂಲ ಪರಿಕಲ್ಪನೆ’ ಎಂದು ಸಿನಿಮಾ ಕುರಿತು ಮಾಹಿತಿ ನೀಡಿದರು.
80ರ ದಶಕದಲ್ಲಿ ದಿಗ್ಲುಪುರ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ತಮ್ಮ ಅಹಮಿಕೆಯನ್ನು ನೀಗಿಕೊಳ್ಳುವ ಸಲುವಾಗಿ ಮತ್ತು ತಮ್ಮ ನ್ನು ವಿರೋಧಿಸುವವರನ್ನು ಮಂತ್ರಶಕ್ತಿಯಿಂದ ಕೊಲ್ಲುವ ಮಂತ್ರವಾದಿಗಳಿರುತ್ತಾರೆ. ಇಂಥ ಹಳ್ಳಿಗೆ ಹೋದವರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಐದು ಜನ ನಾಯಕರು ಅಲ್ಲಿಗೆ ಹೋಗಿ, ಅದರ ರಹಸ್ಯವನ್ನು ಬಯಲಿಗೆಳೆಯುತ್ತಾರೆ. ಅಲ್ಲಿಂದ ಬಂದ ಮೇಲೆ ಅವರೂ ಸಾವನ್ನಪ್ಪುತ್ತಾರೆ. ಇದಕ್ಕೆಲ್ಲ ಕಾರಣವೇನು ಎನ್ನುವುದೇ ದಿಗ್ಲುಪುರ ಚಿತ್ರದ ಎಳೆ ಎಂದು ಹೇಳಿದರು.
ರಾಮನಗರ, ಚನ್ನಪಟ್ಟಣ, ತೈಲೂರು, ಮುತ್ತತ್ತಿ, ತಲಕಾಡು ಸುತ್ತಮುತ್ತ ಶೂಟಿಂಗ್ ನಡೆಸುವ ಯೋಜನೆಯಿದೆ. ಹಿರಿಯನಟ ರಮೇಶ್ ಪಂಡಿತ್, ಲಯ ಕೋಕಿಲ ಆ ಊರಿನ ಇಬ್ಬರು ಪ್ರಬಲ ಮಂತ್ರವಾದಿಗಳಾಗಿ ಕಾಣಿಸಿ
ಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.