ನಿರ್ದೇಶಕ ದುನಿಯಾ ಸೂರಿ ‘ಕೆಂಡಸಂಪಿಗೆ’ ಚಿತ್ರ ತೆರೆಕಂಡ ಬಳಿಕ ಅದರ ಮುಂದಿನ ಭಾಗ ‘ಕಾಗೆ ಬಂಗಾರ’ಕ್ಕೆ ಕೈ ಹಾಕುತ್ತೇನೆಂದು ಸಾಕಷ್ಟು ಸಲ ಹೇಳಿದ್ದರು. ಸುರೇಂದ್ರನಾಥ್ ಬರೆದು, ವಿಕ್ಕಿ ವರುಣ್ ಮತ್ತು ಮನ್ವಿತಾ ಹರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ವಿಭಿನ್ನವಾದ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಚಿತ್ರ ‘ಕಾಗೆ ಬಂಗಾರ’ ಮತ್ತು ‘ಬ್ಲ್ಯಾಕ್ ಮ್ಯಾಜಿಕ್’ ಎಂಬ ಇನ್ನೆರಡು ಭಾಗಗಳನ್ನು ಹೊಂದಿದೆ ಎಂದು ಸೂರಿ ಹೇಳಿದ್ದರು.
ಇದೀಗ ಜಯಣ್ಣ ನಿರ್ಮಾಣದಲ್ಲಿ, ದುನಿಯಾ ಸೂರಿ ನಿರ್ದೇಶನದಲ್ಲಿಯೇ ‘ಕಾಗೆ ಬಂಗಾರ’ ಸೆಟ್ಟೇರುತ್ತಿದೆ. ವಿರಾಟ್ಗೆ ರಿತನ್ಯಾ ಜೋಡಿಯಾಗಲಿದ್ದಾರೆ. ಆದರೆ ಇದು ‘ಕೆಂಡಸಂಪಿಗೆ’ಯ ಮುಂದುವರಿದ ಭಾಗವಲ್ಲ ಎನ್ನುತ್ತಿದೆ ಚಿತ್ರತಂಡ.
‘ಮುಂದಿನ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ದುನಿಯಾ ಸೂರಿ ಬರೆದ ಕಥೆ ಇದು. ಆದರೆ 2015ರ ಚಿತ್ರದ ಮುಂದುವರಿಕೆಯಲ್ಲ. ಬದಲಿಗೆ 2024ರಲ್ಲಿ ಸಿದ್ಧಗೊಂಡ ಹೊಸ ಕಥೆಯನ್ನು ಈ ಚಿತ್ರ ಹೊಂದಿರಲಿದೆ. ನಿರ್ಮಾಪಕ ಸುಧಿ ಅವರ ಬಳಿ ಈ ಚಿತ್ರದ ಶೀರ್ಷಿಕೆಯಿತ್ತು. ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಉಳಿದ ಮಾಹಿತಿ ನೀಡುತ್ತೇವೆ’ ಎನ್ನುತ್ತಾರೆ ನಿರ್ಮಾಪಕ ಜಯಣ್ಣ.
ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯದಲ್ಲಿ ‘ನೆನಪೆ ನಿತ್ಯ ಮಲ್ಲಿಗೆ’ ಸೇರಿದಂತೆ ‘ಕೆಂಡಸಂಪಿಗೆ’ ಚಿತ್ರದ ಹಾಡುಗಳು ಹಿಟ್ ಆಗಿದ್ದವು. ವಿ.ಹರಿಕೃಷ್ಣ ಸಂಗೀತವಿತ್ತು. ‘ಕಾಗೆ ಬಂಗಾರ’ಕ್ಕೆ ಚರಣ್ ರಾಜ್ ಸಂಗೀತವಿದ್ದು, ಶೇಖರ್ ಛಾಯಾಗ್ರಹಣವಿರಲಿದೆ. ‘ಕಾಗೆ ಬಂಗಾರ’ ‘ಕೆಂಡಸಂಪಿಗೆ’ಯಲ್ಲಿ ಒಂದು ಪ್ರಮುಖ ಪಾತ್ರವಾಗಿದ್ದು, ಪ್ರಶಾಂತ್ ಸಿದ್ಧಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.