ದೀಪಾವಳಿ ಪ್ರಾರಂಭ ದಿನದ ಪ್ರಯುಕ್ತ ಕೇದಾರನಾಥ ಸಿನಿಮಾದ ಭಕ್ತಿ ಪ್ರದಾನ ಹಾಡು ’ನಮೋ ನಮೋ’ ಬಿಡುಗಡೆಯಾಗಿದೆ. ಚಿತ್ರದ ಮೊದಲ ಹಾಡಿನ ಮೂಲಕ ಪ್ರಮುಖ ಪಾತ್ರ ಮನ್ಸೂರ್ನ ಪರಿಚಯ ಮಾಡಿಸಲಾಗಿದೆ.
ಗೌರಿ ಕುಂಡದಿಂದ ಕೇದಾರನಾಥ ವರೆಗಿನ 14 ಕಿ.ಮೀ. ಹಾದಿಯಲ್ಲಿ ಭಕ್ತಾದಿಗಳನ್ನು ಹೆಗಲ ಮೇಲೆ ಹೊತ್ತು ಸಾಗುವ ಮುಸ್ಲಿಂ ಯುವಕನ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಭಿನಯಿಸಿದ್ದಾರೆ. ಯಾತ್ರೆಯ ಸಮಯದಲ್ಲಿ ತನ್ನ ಗ್ರಾಹಕರನ್ನು ಅತ್ಯಂತ ಕಾಳಜಿಯಿಂದ ಕಾಣುವ, ಶ್ರಮ ಪಟ್ಟು ದುಡಿಯುವ, ಸದಾ ಉಲ್ಲಾಸಿತನಾಗಿರುವವ ಮನ್ಸೂರ್.
ಅಮಿತಾಬ್ ಭಟ್ಟಾಚಾರ್ಯ ಬರೆದಿರುವ ಸಾಲುಗಳನ್ನು ಅಮಿತ್ ತ್ರಿವೇದಿ ಹಾಡಿದ್ದಾರೆ. ಕೇದಾರನಾಥನ ಮಂದಿರ, ಸಾಗುವ ಹಾದಿಯಲ್ಲಿ ನಿಸರ್ಗದ ಸೊಬಗಿನ ರಮಣೀಯತೆಯನ್ನು ಈ ಹಾಡಿನ ದೃಶ್ಯಗಳಲ್ಲಿ ಕಾಣಬಹುದು. ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಈ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.
2013ರಲ್ಲಿ ಉತ್ತರಾಖಂಡದಲ್ಲಿಆದ ಪ್ರವಾಹ ಮತ್ತು ಆಗಿನ ಸ್ಥಿತಿಯೊಂದಿಗೆ ಹಿಂದು ಯುವತಿ, ಮುಸ್ಲಿಂ ಯುವಕನ ಪ್ರೇಮದ ಕಥೆಯನ್ನು ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಅಭಿಷೇಕ್ ಕಪೂರ್ ಚಿತ್ರವನ್ನು ನಿರ್ದೇಶಿಸಿದ್ದು, ಡಿಸೆಂಬರ್ 7ರಂದು ಸಿನಿಮಾ ತೆರೆಕಾಣಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.