ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸುತ್ತಿದ್ದು, ಇನ್ನೊಂದೆಡೆ ಚಿತ್ರರಂಗದ ಗಣ್ಯರು ಕೂಡ ಚಿತ್ರವನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದಾರೆ. ನಟ ಗೋಲ್ಡನ್ಸ್ಟಾರ್ ಗಣೇಶ್ ಕಾಂತಾರದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಡಿವೈನ್ ಬ್ಲಾಕ್ಬಸ್ಟರ್ ಕಾಂತಾರ ತಂಡಕ್ಕೆ ಅಭಿನಂದನೆಗಳು. ಇದಕ್ಕೆ ಅತ್ಯಂತ ಅರ್ಹ ಚಿತ್ರ’ಎಂದು ಗಣೇಶ್ ಬರೆದುಕೊಂಡಿದ್ದಾರೆ. ಜೊತೆಗೆ ಕಾಂತಾರ ಚಿತ್ರದ ಪೋಸ್ಟರ್ ಸಹ ಶೇರ್ ಮಾಡಿದ್ದಾರೆ. ನಿರ್ದೇಶಕ ರಿಷಭ್ ಶೆಟ್ಟಿ ಧನ್ಯವಾದಗಳೊಂದಿಗೆ ಈ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ, ನಟಿ ರಮ್ಯಾ ಕಾಂತಾರದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದರು. ತೆಲುಗು ನಟ ಪ್ರಭಾಸ್ ಚಿತ್ರವನ್ನು ಮೆಚ್ಚಿದ್ದರು. ನಟ, ನಿರ್ದೇಶಕ ನವೀನ್ಕೃಷ್ಣ ಕೂಡ ಚಿತ್ರವನ್ನು ಮೆಚ್ಚಿ ಪೋಸ್ಟ್ ಮಾಡಿದ್ದಾರೆ. ಚಿತ್ರರಂಗದ ಅನೇಕರು ಕಾಂತಾರದ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದಾರೆ. ದಕ್ಷಿಣ ಕನ್ನಡದ ದೇಸಿ ಸೊಗಡಿನ, ದೈವ, ಭೂತ ಕೋಲಗಳ ಸೊಬಗನ್ನು ಹೊಂದಿರುವ ಚಿತ್ರಕ್ಕೆ ನೆಟ್ಟಿಗರಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
ಇದನ್ನೂ ಓದಿ:ಕಾಂತಾರಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.