ADVERTISEMENT

ಬಾದಾಮಿಯಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರತಂಡ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 10:51 IST
Last Updated 29 ಮಾರ್ಚ್ 2022, 10:51 IST
ಯಶಸ್ ಸೂರ್ಯ ಹಾಗೂ ಸೋನಲ್‌ ಮೊಂತೆರೋ
ಯಶಸ್ ಸೂರ್ಯ ಹಾಗೂ ಸೋನಲ್‌ ಮೊಂತೆರೋ   

ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದ ಟೈಟಲ್‌ ಹಾಡಿನ ಚಿತ್ರೀಕರಣ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯಲ್ಲಿ ಅದ್ಧೂರಿಯಾಗಿ ನಡೆದಿದೆ.

ಚಿತ್ರದಲ್ಲಿ ನಾಯಕನಾಗಿ ಯಶಸ್ ಸೂರ್ಯ ನಟಿಸುತ್ತಿದ್ಡು, ಯೋಗರಾಜ್‌ ಭಟ್‌ ಅವರೇ ನಿರ್ದೇಶಿಸಿದ್ದ ‘ಪಂಚತಂತ್ರ’ ಸಿನಿಮಾ ಮೂಲಕವೇ ಕೋಸ್ಟಲ್‌ವುಡ್‌ನಿಂದ ಚಂದನವನಕ್ಕೆ ನಾಯಕಿಯಾಗಿ ಹೆಜ್ಜೆ ಇಟ್ಟಿದ್ದ ನಟಿ ಸೋನಲ್‌ ಮೊಂತೆರೋ ಚಿತ್ರದ ನಾಯಕಿ. ಚಿತ್ರಕ್ಕೆ ಮೊದಲು ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕಾಲ್‌ಶೀಟ್‌ ಸಮಸ್ಯೆಯಿಂದಾಗಿ ರಚಿತಾ ಚಿತ್ರದಿಂದ ಹೊರನಡೆದಿದ್ದರು.

ಟೈಟಲ್‌ ಹಾಡಿನ ಚಿತ್ರೀಕರಣದಲ್ಲಿ ನಟ,ಕೃಷಿ ಸಚಿವ ಬಿ.ಸಿ.ಪಾಟೀಲ ಅವರೂ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಬೇತಿ ಪಡೆದಿರುವ ಕುಸ್ತಿಪಟುಗಳೂ ಹಾಡಿನ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ನಡುವಿನ ಸಂಭಾಷಣೆಯ ದೃಶ್ಯಗಳ ಚಿತ್ರೀಕರಣವೂ ನಡೆದಿದೆ. ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಇದರ ಚಿತ್ರೀಕರಣವೂ ಶೀಘ್ರದಲ್ಲೇ ನಡೆಯಲಿದೆ ಎಂದು ಚಿತ್ರತಂಡವು ತಿಳಿಸಿದೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರೂ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ‘ಸೋಮಣ್ಣ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ ಅವರ ಪತ್ನಿ ವನಜಾ ಪಾಟೀಲ ಹಾಗೂ ಪುತ್ರಿ ಸೃಷ್ಟಿ ಪಾಟೀಲ ಬಂಡವಾಳ ಹೂಡಿದ್ದಾರೆ. ಈ ಆ್ಯಕ್ಷನ್‌ ಡ್ರಾಮಾಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.