ADVERTISEMENT

ನನ್ನ ತಂಟೆಗೆ ಕೈಹಾಕಿದರೆ ಸಹಿಸಲ್ಲ: ಪರ ಭಾಷಾ ಸಿನಿಮಾಕ್ಕೆ ನಟ ಗಣೇಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 9:01 IST
Last Updated 24 ಸೆಪ್ಟೆಂಬರ್ 2019, 9:01 IST
ಗಣೇಶ್‌
ಗಣೇಶ್‌   

‘ನಾನು ಪ್ರೀತಿಯಿಂದ ‘ಗೀತಾ’ ಸಿನಿಮಾ ಮಾಡಿದ್ದೇನೆ. ಗೋಕಾಕ್‌ ಚಳವಳಿಯ ಹಿನ್ನೆಲೆ ಇಟ್ಟುಕೊಂಡು ಹೊಸೆದಿರುವುದು ಕಥೆ ಇದು. ಪರಭಾಷೆ ಸಿನಿಮಾಗಳಿಗೆ ಅನುಕೂಲ ಕಲ್ಪಿಸಲು ನನ್ನ ಸಿನಿಮಾವನ್ನು ಥಿಯೇಟರ್‌ನಿಂದ ತೆಗೆಯಲು ಮುಂದಾದರೆ ಹೋರಾಟಕ್ಕಿಳಿಯುವುದು ನಿಶ್ಚಿತ’ ಎಂದು ‘ಗೋಲ್ಡನ್‌ ಸ್ಟಾರ್’ ಗಣೇಶ್‌ ಎಚ್ಚರಿಕೆ ನೀಡಿದ್ದಾರೆ.

‘ಗೀತಾ’ ಸಿನಿಮಾ ಸೆಪ್ಟೆಂಬರ್‌ 27ರಂದು ಬಿಡುಗಡೆಯಾಗುತ್ತಿದೆ. ಅಕ್ಟೋಬರ್‌ 2ರಂದು ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ತೆರೆಕಾಣುತ್ತಿದೆ. ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಕರ್ನಾಟಕದ ಬಹಳಷ್ಟು ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತದೆ. ಹಾಗಾಗಿ, ಈ ವಾರ ತೆರೆಕಾಣುತ್ತಿರುವ ‘ಗೀತಾ’, ’ಕಿಸ್‌’ ಹಾಗೂ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರಗಳಿಗೆ ಥಿಯೇಟರ್‌ ಸಮಸ್ಯೆ ಎದುರಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಗಣೇಶ್‌, ‘ನನ್ನ ಸಿನಿಮಾದ ತಂಟೆಗೆ ಕೈ ಹಾಕಬೇಡಿ. ಆ ರೀತಿ ನಡೆದುಕೊಂಡರೆ ನಾನು ಸುಮ್ಮನಿರುವುದಿಲ್ಲ. ಚಿತ್ರಮಂದಿರದ ಮುಂದೆ ಬಂದು ಪ್ರತಿಭಟನೆ ನಡೆಸುತ್ತೇನೆ’ ಎಂದು ಖಡಕ್‌ ಆಗಿ ವಾರ್ನಿಂಗ್‌ ನೀಡಿದರು.

ADVERTISEMENT

‘ಗೀತಾ’ ಅಪ್ಪಟ ಕನ್ನಡ ಚಿತ್ರ. ಕನ್ನಡ ಪರವಾದ ಸಿನಿಮಾ. ಪ್ರಥಮ ಬಾರಿಗೆ ಗೋಕಾಕ್‌ ಚಳವಳಿಯನ್ನು ತೆರೆಯ ಮೇಲೆ ತರುತ್ತಿದ್ದೇವೆ. ಇದಕ್ಕಾಗಿ ಚಿತ್ರತಂಡ ಸಾಕಷ್ಟು ಶ್ರಮವಹಿಸಿದೆ. ಪರಭಾಷೆಯ ಸಿನಿಮಾಗಳು ಏನಾಗುತ್ತವೆಯೋ ನನಗೆ ಗೊತ್ತಿಲ್ಲ. ಅದೇ ದಿನದಂದು ಹಲವು ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ನಮ್ಮ ಅಭ್ಯಂತರವಿಲ್ಲ. ಆದರೆ, ಪರಭಾಷೆಯ ಸಿನಿಮಾಗಳಿಗೆ ಅವಕಾಶ ಅನುಕೂಲ ಕಲ್ಪಿಸಲು ಕನ್ನಡ ಸಿನಿಮಾಗಳ ಮೇಲೆ ಗದಾಪ್ರಹಾರ ಸಲ್ಲದು ಎಂದು ಹೇಳಿದರು.

150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗೀತಾ’ ಸಿನಿಮಾ ತೆರೆಕಾಣುತ್ತಿದೆ. ಪೈರಸಿ ಕಾಟಕ್ಕೆ ಕಡಿವಾಣ ಹಾಕಲು ಚಿತ್ರತಂಡ ಕ್ರಮವಹಿಸಿದೆ. ‍ಈ ನಿಟ್ಟಿನಲ್ಲಿ ಖಾಸಗಿ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯಂತೆ.

‘ದಕ್ಷಿಣ ಭಾರತದ ಚಿತ್ರಗಳಿಗೆ ಮಾತ್ರವೇ ಪೈರಸಿ ಕಾಟ ತಟ್ಟುತ್ತಿದೆ. ‘ಗೀತಾ’ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಮೂರು ವಾರಗಳ ಬಳಿಕ ಬೇರೆ ಕಡೆಯಲ್ಲೂ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಪೈರಸಿ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ’ ಎಂದು ನಿರ್ಮಾಪಕ ಸೈಯದ್‌ ಸಲಾಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.