
ಪೃಥ್ವಿ ಶಾಮನೂರು ನಟನೆಯ ‘ಹೃದಯಂ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಯುವ ಸಮುದಾಯದ ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ರಜತ್ ಸೂರ್ಯವಂಶಿ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ. ಚಿತ್ರದ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಯೋಗರಾಜ ಭಟ್, ಗೀತಸಾಹಿತಿ ನಾಗೇಂದ್ರ ಪ್ರಸಾದ್ ಕೂಡ ತಂಡಕ್ಕೆ ಸಾಥ್ ನೀಡಿದರು.
ಪೃಥ್ವಿ ಶಾಮನೂರು ಈ ಹಿಂದೆ ‘ಪದವಿಪೂರ್ವ’, ‘ಉಡಾಳ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಪ್ರಣಿತ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಮೂಲಕ ಶ್ರೀದೇವಿ ಎಲ್.ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಕಳೆದ ಹನ್ನೆರಡು ವರ್ಷಗಳಿಂದ ನಾನು ನಂದಕಿಶೋರ್ ಜತೆ ‘ವಿಕ್ಟರಿ’, ‘ಅಧ್ಯಕ್ಷ’ ಮೊದಲಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಇದೊಂದು ಮನಸಿಗೆ ಮುದ ನೀಡುವ ಪ್ರೇಮಕಥೆ. ನೈಜ ಘಟನೆಯೊಂದನ್ನಾಧರಿಸಿದ ಚಿತ್ರ. 2000-2006ರ ಸಮಯದಲ್ಲಿ ಕಾಲೇಜೊಂದರಲ್ಲಿ ನಡೆದ ಪ್ರೇಮಕಥೆಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ, ಪ್ರೇಮದ ಪ್ರಕರಣಗಳು ಹೇಗೆಲ್ಲ ನಡೆಯುತ್ತಿತ್ತು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ. ಮಾರ್ಚ್ ಮೊದಲ ವಾರದಿಂದ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎಂದರು ನಿರ್ದೇಶಕ.
ಚಿತ್ರದಲ್ಲಿ ಐದು ಹಾಡುಗಳಿದ್ದು ಚೇತನ್ ದಾವ್ಯ ಸಂಗೀತ ನಿರ್ದೇಶನವಿದೆ. ಚಿತ್ರದ ನಾಯಕಿಯಾಗಿ ಆರಾಧನಾ ಭಟ್, ನಾಯಕಿಯ ತಂದೆಯಾಗಿ ರಮೇಶ್ ಇಂದಿರಾ, ನಾಯಕನ ತಂದೆ, ತಾಯಿಯಾಗಿ ರವಿಭಟ್, ಸ್ವಾತಿ ನಟಿಸುತ್ತಿದ್ದಾರೆ. ಸಾಗರ್ ಛಾಯಾಚಿತ್ರಗ್ರಹಣ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.