ADVERTISEMENT

ರಾಜಕೀಯಕ್ಕೆ ಪ್ರವೇಶಿಸುತ್ತಾರಾ ನಟ ಇಳಯ ದಳಪತಿ ವಿಜಯ್?

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 4:52 IST
Last Updated 4 ಅಕ್ಟೋಬರ್ 2018, 4:52 IST
ವಿಜಯ್   (ಕೃಪೆ: ಟ್ವಿಟರ್)
ವಿಜಯ್ (ಕೃಪೆ: ಟ್ವಿಟರ್)   

ಚೆನ್ನೈ:'ನಾನು ತಮಿಳುನಾಡಿನ ಮುಖ್ಯಮಂತ್ರಿಯಾದರೆ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಹೋರಾಡುತ್ತೇನೆ' ಎಂದು ತಮಿಳು ನಟ ಇಳಯ ದಳಪತಿ ವಿಜಯ್ ಹೇಳಿದ್ದಾರೆ.
ಸರ್ಕಾರ್ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯದ ಬಗ್ಗೆ ಒಲವು ತೋರಿಸಿದ್ದು ವಿಜಯ್ ರಾಜಕೀಯ ಪ್ರವೇಶ ಸಾಧ್ಯತೆ ಇದೆ ಎಂಬ ಮಾತಿಗೆ ಪುಷ್ಠಿ ನೀಡಿದೆ.ಸರ್ಕಾರ್ ಸಿನಿಮಾ ದೀಪಾವಳಿಗೆ ತೆರೆ ಕಾಣಲಿದೆ.
ನಟ ಕಮಲ್ ಹಾಸನ್ ಮತ್ತು ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣಾ ಕಣಕ್ಕಿಳಿಯುವ ಒಲವು ತೋರಿಸಿದ ಬೆನ್ನಲ್ಲೇ ವಿಜಯ್ ರಾಜಕೀಯದ ಬಗ್ಗೆ ಮಾತನಾಡಿದ್ದು ಕುತೂಹಲ ಮೂಡಿಸಿದೆ.
ಸರ್ಕಾರ್ ಸಿನಿಮಾದಲ್ಲಿ ಮುಖ್ಯಮಂತ್ರಿಯವರ ಪಾತ್ರ ನಿರ್ವಹಿಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಇಲ್ಲ ಎಂದು ವಿಜಯ್ ಉತ್ತರಿಸಿದ್ದಾರೆ. ಒಂದು ವೇಳೆ ನೀವು ರಾಜ್ಯದ ಮುಖ್ಯಮಂತ್ರಿಯಾದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್, ನಾನು ಮುಖ್ಯಮಂತ್ರಿಯಾಗಿ 'ನಟಿಸಲ್ಲ'. ಜನರ ಒಳಿತಿಗಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಲಂಚ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯುವುದು ಅಷ್ಟು ಸುಲಭವಲ್ಲ. ನಾವು ಅದರೊಂದಿಗೆಹೊಂದಿ ಕೊಂಡು ಬದುಕುತ್ತಿರುವುದರಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ .ಮೆರ್ಸಲ್ ಸಿನಿಮಾದಲ್ಲಿ ಸ್ವಲ್ಪ ರಾಜಕೀಯ ಇತ್ತು. ಸರ್ಕಾರ್ ಸಿನಿಮಾದಲ್ಲಿ ರಾಜಕೀಯ ಇದೆ. ಈ ಸಿನಿಮಾ ಮಾಡಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ.

ವಿಜಯ್ ಮಾತುಗಳ ಮುಖ್ಯಾಂಶಗಳು

  • ಮುಖ್ಯಮಂತ್ರಿಯಾದರೆ ರಾಜ್ಯದಿಂದ ಭ್ರಷ್ಟಾಚಾರ ತೊಲಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವೆ
  • ಸಾಮಾನ್ಯವಾಗಿ ರಾಜಕೀಯ ಪ್ರವೇಶಿಸುವವರು ಒಂದು ಪಕ್ಷ ಕಟ್ಟುತ್ತಾರೆ.ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆಮೇಲೆ ಸರ್ಕಾರ ರಚಿಸುತ್ತಾರೆ, ನಾವು ಮೊದಲು ಸರ್ಕಾರ್ ರಚಿಸುತ್ತೇವೆ. ನಂತರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ.
  • ದಕ್ಷ ನೇತಾರನಿದ್ದರೆ ರಾಜ್ಯದಲ್ಲಿ ಉತ್ತಮ ಆಡಳಿತ ಸಿಗುತ್ತದೆ, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT