ADVERTISEMENT

ಐಶ್ವರ್ಯಾಗೆ ನಟನೆಯ ಯೋಗ

ಕೆ.ಎಂ.ಸಂತೋಷ್‌ ಕುಮಾರ್‌
Published 28 ನವೆಂಬರ್ 2019, 19:30 IST
Last Updated 28 ನವೆಂಬರ್ 2019, 19:30 IST
ಐಶ್ವರ್ಯಾ ರಾವ್‌
ಐಶ್ವರ್ಯಾ ರಾವ್‌   

ನ ಟಿ ಐಶ್ವರ್ಯಾ ರಾವ್‌ ನಾಯಕಿಯಾಗಿ ಮತ್ತು ಕರ್ಣಕುಮಾರ್‌(ಬಸುಕುಮಾರ್‌) ನಾಯಕನಾಗಿ ನಟಿಸಿರುವ ‘ರಣಹೇಡಿ’ ಚಿತ್ರ ಇದೇ ವಾರ ತೆರೆಕಾಣುತ್ತಿದೆ. ಈ ನೆಲದ ರೈತರ ಸಮಸ್ಯೆಗಳನ್ನು ಅನಾವರಣಗೊಳಿಸುವ ಮತ್ತು ಆ ಸಮಸ್ಯೆಗಳಿಗೆ ಕಾರ್ಯಸಾಧ್ಯ ಪರಿಹಾರ ಸೂಚಿಸುವ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ಮೇಲೆ ಐಶ್ವರ್ಯಾ ಅವರಿಗೂ ಸಾಕಷ್ಟು ನಿರೀಕ್ಷೆಗಳಿವೆ. ಇದು ಅವರ ಮೂರನೇ ಚಿತ್ರ. ತಮ್ಮ ನಟನಾ ಬದುಕಿನ ಬಗ್ಗೆ ಅವರು ‘ಸಿನಿಮಾ ಪುರವಣಿ’ಯೊಂದಿಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ಮೂಲತಃ ಉಡುಪಿಯವರಾದ ಐಶ್ವರ್ಯಾ ರಾವ್‌, ತಂದೆ– ತಾಯಿಯೊಟ್ಟಿಗೆ ಮೈಸೂರಿನಲ್ಲಿ ನೆಲೆ ನಿಂತಿದ್ದಾರೆ. ತಾಯಿ ಭಾಷೆ ತುಳು ಎನ್ನುವ ಅವರು ಬಿಬಿಎಂ ಪದವಿಯವರೆಗೆ ಓದಿದ್ದು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಲು ಚಿತ್ರರಂಗಕ್ಕೆ ಬಂದಿದ್ದಾರೆ. ಜತೆಗೆ ಯೋಗ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲೂ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದಾರೆ.

ಮೈಸೂರಿನಲ್ಲಿ ‘ಅಷ್ಟಾಂಗ ವಿನ್ಯಾಸ’ ಯೋಗ ತರಬೇತಿ ಕೇಂದ್ರದಲ್ಲಿ ಇವರು ಯೋಗ ಕಲಿಸುತ್ತಾರೆ. ಮೈಸೂರಿಗೆ ಯೋಗ ಕಲಿಯಲು ಬರುವ ಬಹುತೇಕ ವಿದೇಶಿಗರು ಇವರ ಯೋಗ ಕೇಂದ್ರದಲ್ಲೇ ಯೋಗ ಹೇಳಿಸಿಕೊಳ್ಳುತ್ತಾರಂತೆ.ಬಿಡುವಿನ ವೇಳೆಯಲ್ಲಿ ನೆರೆಹೊರೆಯವರ ಮಕ್ಕಳು ಮತ್ತು ಆಸಕ್ತರಿಗೆ ಯೋಗವನ್ನು ಉಚಿತವಾಗಿ ಕಲಿಸುತ್ತಿದ್ದಾರೆ. ಇವರು ಡಾನ್ಸರ್‌ ಕೂಡ ಹೌದು. ಭರತನಾಟ್ಯದಲ್ಲೂಪ್ರವೀಣೆ.ಸಾಲ್ಸಾ,ಬೆಲ್ಲಿ ಡಾನ್ಸ್‌.. ಹೀಗೆ ಹಲವು ಪ್ರಾಕಾರದ ಡಾನ್ಸ್‌ಗಳುಇವರಿಗೆ ಗೊತ್ತು.

ADVERTISEMENT

ಐಶ್ವರ್ಯಾ ಅವರಿಗೆ ಚಾಲೆಂಜಿಂಗ್‌ ಪಾತ್ರಗಳು ತುಂಬಾ ಇಷ್ಟವಂತೆ. ಸುದೀಪ್‌, ದರ್ಶನ್‌ ಅವರಂತಹ ದೊಡ್ಡ ನಟರೊಂದಿಗೆ ನಟಿಸಲು ಇಷ್ಟವಿದೆ. ‘ದೊಡ್ಡ ನಟರೊಂದಿಗೆ ನಟಿಸುವ ಅವಕಾಶಗಳು ಸಿಗುತ್ತವೆ, ಇಲ್ಲ ಎನ್ನಲಾಗದು. ಆದರೆ, ನಮ್ಮ ಪಾತ್ರಗಳಿಗೂ ತುಂಬಾ ಸ್ಕೋಪ್‌ ಇರುವಂಥ ಕಥೆಯಾಗಿರಬೇಕು’ ಎನ್ನುವ ಜಾಣ್ಮೆ ಅವರದ್ದು. ‘ಕಮರ್ಷಿಯಲ್‌ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಲುಹೋಗುತ್ತಿಲ್ಲ. ಡಾನ್ಸ್‌, ಹಾಡಿಗೆ ಸೀಮಿತವಾಗಿರುವಕಮರ್ಷಿಯಲ್‌ ಸಿನಿಮಾಗಳನ್ನು ಎಲ್ಲ ನಟಿಯರೂ ಮಾಡುತ್ತಾರೆ. ನನ್ನ ಪ್ರಕಾರ ಅಂತಹ ಪಾತ್ರಗಳಿಗೆ ಹೆಚ್ಚು ತೂಕವೇ ಇರುವುದಿಲ್ಲ. ಹಾಗಾಗಿ ನಾನು ಕಲಿಕೆಗೆ ಅವಕಾಶ ಇರುವ ಪಾತ್ರಗಳತ್ತ ಗಮನ ಕೊಡುತ್ತಿದ್ದೇನೆ. ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಿಕ್ಕಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಸಹರಾ’ ಮತ್ತು ‘ಕನ್ನಡಿ’ ಎರಡೂ ಸಿನಿಮಾಗಳು ನಾಯಕಿ ಪ್ರಧಾನವಾಗಿವೆ. ಆ ಎರಡು ಸಿನಿಮಾಗಳಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶವಿದೆ’ ಎನ್ನುವ ಮಾತು ಸೇರಿಸಿದರು.

ಅಭಿನಯದಲ್ಲಿ ಆಸಕ್ತಿ ಬೆಳೆದ ಬಗ್ಗೆಯೂ ಹೇಳಿಕೊಂಡ ಅವರು, ‘ಮೂರನೇ ತರಗತಿಯಲ್ಲಿರುವಾಗಲೇಅಭಿನಯ ಆಸಕ್ತಿ ಮೂಡಿತ್ತು. ಆಗಲೇ‘ಮಂಥರೆಯ ಮಂತ್ರೋಪದೇಶ’ ನಾಟಕದಲ್ಲಿ ದಶರಥನ ಪಾತ್ರದಲ್ಲಿ ಅಭಿನಯಿಸಿದ್ದೆ’ ಎಂದು ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

‘ರಣಹೇಡಿ’ ಸಿನಿಮಾದತ್ತ ಮಾತು ಹೊರಳಿಸಿದ ಅವರು, ‘ಬಳ್ಳಾರಿಯಿಂದ ಕಬ್ಬು ಕಡಿಯಲು ಮಂಡ್ಯಕ್ಕೆ ವಲಸೆ ಬರುವ ಕೂಲಿಕಾರ್ಮಿಕ ಹುಡುಗಿಯ ಪಾತ್ರ ನನ್ನದು. ಮಂಡ್ಯದ ರೈತನ ಮಗನಿಗೆ ಹೇಗೆ ಒಲಿಯುತ್ತೇನೆ, ಪೋಕರಿಯಾದ ಆತನನ್ನು ಹೇಗೆ ಒಲಿಸಿಕೊಳ್ಳುತ್ತೇನೆ ಎನ್ನುವುದು ಕಥೆಯ ಕುತೂಹಲ. ಈ ಚಿತ್ರದಲ್ಲಿ ಬರೀ ಪ್ರೇಮಕಥೆ ಮಾತ್ರವಲ್ಲ, ಕಬ್ಬು ಬೆಳೆಗಾರರ ಸಮಸ್ಯೆ, ಕಾವೇರಿ ನೀರಿನ ಸಮಸ್ಯೆ, ಟೊಮೆಟೊ ಬೆಲೆ ಕುಸಿತ ಹೀಗೆ ಹಲವಾರು ಆಯಾಮಗಳಲ್ಲಿ ರೈತರ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನವಿದೆ. ಬಹುತೇಕ ಸಿನಿಮಾಗಳಂತೆ ಸಮಸ್ಯೆಗಳನ್ನು ತೆರೆದಿಡುವ ಕೆಲಸಕ್ಕೆ ಮಾತ್ರ ಚಿತ್ರ ಸೀಮಿತವಾಗಿಲ್ಲ, ಒಂದು ಹೆಜ್ಜೆ ಮುಂದೆ ಹೋಗಿಪರಿಹಾರ ಸೂಚಿಸುವ ಕೆಲಸವು ಆಗಿದೆ’ ಎಂದರು.

‘ಈ ಸಿನಿಮಾ ಮೂಲಕ ನಾನು ನಾಟಿ ಮಾಡುವುದನ್ನು, ಕಬ್ಬು ಕಡಿಯುವುದು, ಕಬ್ಬಿನ ಹೊರೆ ಕಟ್ಟುವುದನ್ನು ಕಲಿತ್ತಿದ್ದೇನೆ. ಈಗ ನಾನು ಹಳ್ಳಿಗೆ ಹೋದರೆ ಅಲ್ಲಿನ ಬದುಕಿಗೆ ಒಗ್ಗಿಕೊಳ್ಳುವಂತೆ ಕೃಷಿ ಕೆಲಸ ಕಲಿತಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು.

‘ರವಿ ಹಿಸ್ಟರಿ’ ಚಿತ್ರದಲ್ಲಿ ನಟಿಸುವಾಗ ಆ ಚಿತ್ರದ ನಿರ್ದೇಶಕ ಮಧುಚಂದ್ರ ಅವರು, ‘ರಣಹೇಡಿ’ ಚಿತ್ರಕ್ಕೆ ಆಡಿಷನ್‌ ಕೊಡುವಂತೆ ಹೇಳಿದ್ದರು. ನಿರ್ದೇಶಕ ಮನು ಕೆ.ಶೆಟ್ಟಿಹಳ್ಳಿ ಅವರು ಕಥೆ ಹೇಳಿದಾಗ, ನಾನು ಸಹ ಅಂಥದ್ದೇ ಪಾತ್ರಕ್ಕೆ ಕಾಯುತ್ತಿದ್ದೆ. ನಾಯಕಿ ಎನ್ನುವ ಐಡೆಂಟಿಟಿ ಸಿಗುವುದಕ್ಕೂ ಮೊದಲು ನನಗೆ ಒಬ್ಬ ಕಲಾವಿದೆ ಎನ್ನುವ ಐಡೆಂಟಿಟಿ ಬೇಕಿತ್ತು. ಹಾಗಾಗಿ ಡಿಗ್ಲಾಮರ್‌ ಇರುವ ಈ ಪಾತ್ರ ಒಪ್ಪಿಕೊಂಡೆ. ಇದರಲ್ಲಿ ನನ್ನ ಪಾತ್ರವನ್ನು ಎರಡು ಶೇಡ್‌ನಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಒಂದು ಬಳ್ಳಾರಿ ಭಾಗದ ಭಾಷೆ ಮಾತನಾಡುವ ಹುಡುಗಿ ಮತ್ತು ಇನ್ನೊಂದು ಮಂಡ್ಯ ಭಾಷೆ ಮಾತನಾಡುವ ಗೃಹಿಣಿಯ ಪಾತ್ರ. ಇವೆರಡೂ ನನಗೆ ಸವಲೊಡಿದ್ದವು. ವಿ.ಮನೋಹರ್‌ ಅವರು ‘ಜನುಮದ ಜೋಡಿ’ ಚಿತ್ರದಂತೆಯೇ ಈ ಸಿನಿಮಾಕ್ಕೂ ಒಳ್ಳೆಯ ಸಂಗೀತ ಸಂಯೋಜಿಸಿದ್ದಾರೆ. ಆರು ಹಾಡುಗಳು ತುಂಬಾ ವಿಭಿನ್ನವಾಗಿ ಮೂಡಿ ಬಂದಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.