ADVERTISEMENT

ಬಾಲಿವುಡ್‌ಗೆ ನನ್ನನ್ನು ಭರಿಸಲಾಗದು: ಮಹೇಶ್ ಬಾಬು ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 9:30 IST
Last Updated 13 ಮೇ 2022, 9:30 IST
ಕಂಗನಾ ರನೌತ್‌ ಮತ್ತು ಮಹೇಶ್‌ ಬಾಬು
ಕಂಗನಾ ರನೌತ್‌ ಮತ್ತು ಮಹೇಶ್‌ ಬಾಬು    

ಮುಂಬೈ: ‘ಬಾಲಿವುಡ್‌ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂದು ತೆಲುಗು ನಟ ಮಹೇಶ್‌ ಬಾಬು ನೀಡಿದ್ದ ಹೇಳಿಕೆ ಕುರಿತು ನಟಿ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಗುರುವಾರ ನಡೆದ ‘ಧಾಕಡ್‌’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕಂಗನಾ ರನೌತ್‌ ಪಾಲ್ಗೊಂಡಿದ್ದರು. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹೇಶ್ ಬಾಬು ನೀಡಿದ್ದ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ.

‘ಮಹೇಶ್‌ ಬಾಬು ಹೇಳಿರುವುದು ಸರಿ ಇದೆ. ಅವರ ಮಾತನ್ನು ನಾನು ಒಪ್ಪುತ್ತೇನೆ. ಮಹೇಶ್, ತೆಲುಗು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಹೇಶ್‌ ಅವರ ತಲೆಮಾರಿನ ಅನೇಕ ನಟರು ತಮ್ಮ ಪರಿಶ್ರಮದಿಂದ ತೆಲುಗು ಚಿತ್ರರಂಗವನ್ನು ಭಾರತದಲ್ಲಿ ನಂಬರ್ ಒನ್ ಚಿತ್ರೋದ್ಯಮವನ್ನಾಗಿ ಮಾಡಿದ್ದಾರೆ. ಹಾಗಾಗಿ ಬಾಲಿವುಡ್‌ಗೆ ಖಂಡಿತವಾಗಿಯೂ ಮಹೇಶ್ ಅವರನ್ನು ಭರಿಸಲು ಸಾಧ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಇತ್ತೀಚೆಗೆ ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಚಾರ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿಂದಿಯಲ್ಲಿ ಯಾವಾಗ ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನು ಸೊಕ್ಕಿನ ಧ್ವನಿಯಲ್ಲಿ ಮಾತನಾಡುತ್ತೇನೆಯೇ ಎಂದು ನನಗೆ ಗೊತ್ತಿಲ್ಲ. ನನಗೆ ಹಿಂದಿಯಿಂದ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ, ಸರಳ ವಿಷಯವೆಂದರೆ ಬಾಲಿವುಡ್‌ನವರು ನನ್ನನ್ನು ಭರಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಹಾಗಾಗಿ ನಾನು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ತೆಲುಗು ಚಿತ್ರರಂಗದಲ್ಲಿ ನನಗೆ ಸಾಕಷ್ಟು ಗೌರವ ಸಿಗುತ್ತಿದೆ. ಹಾಗಾಗಿ ನನ್ನ ಚಿತ್ರರಂಗ ಬಿಟ್ಟು ಬೇರೆ ಚಿತ್ರರಂಗಕ್ಕೆ ಹೋಗುವ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ’ ಎಂದಿದ್ದರು.

ಓದಿ...41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ

ಮಹೇಶ್‌ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಮೇ 12 (ಗುರುವಾರ) ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಂಗನಾ ಅಭಿನಯದ ‘ಧಾಕಡ್‌’ ಚಿತ್ರ ಇದೇ 20ರಂದು ಬಿಡುಗಡೆಯಾಗಲಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.