ಭಯೋತ್ಪಾದನೆಯು ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದೆ. ಉಗ್ರರ ದುಷ್ಕೃತ್ಯಗಳಿಗೆ ಮನುಕುಲ ಅಪಾಯಕ್ಕೆ ಸಿಲುಕಿದೆ. ಚಿತ್ರರಂಗಕ್ಕೂ ಮತ್ತು ಭಯೋತ್ಪಾದನೆಗೂ ಸಂಬಂಧವಿದೆಯೇ? ಬಾಲಿವುಡ್ ನಟಿ ಕಂಗನಾ ರನೌತ್ಗೆ ಪ್ರಕಾರ ಭಾರತೀಯ ಚಿತ್ರರಂಗಕ್ಕೆ ಎಂಟು ಮಾದರಿಯೇ ಭಯೋತ್ಪಾದನೆಗಳು ಕಂಟಕವಾಗಿ ಪರಿಣಮಿಸಿವೆಯಂತೆ.
ಚಿತ್ರರಂಗಕ್ಕೆ ನೆಪೋಟಿಸಂ ಟೆರರಿಸಂ, ಡ್ರಗ್ಸ್ ಮಾಫಿಯಾ ಟೆರರಿಸಂ, ಸೆಕ್ಸ್ ಟೆರರಿಸಂ, ಧರ್ಮ ಮತ್ತು ಪ್ರಾದೇಶಿಕತೆಯ ಟೆರರಿಸಂ, ಫಾರಿನ್ ಫಿಲ್ಮ್ ಟೆರರಿಸಂ, ಪೈರಸಿ ಟೆರರಿಸಂ, ಕಾರ್ಮಿಕರ ಶೋಷಣೆಯ ಟೆರರಿಸಂ, ಪ್ರತಿಭೆಯ ಶೋಷಣೆಯ ಟೆರರಿಸಂ ಕಾಡುತ್ತಿವೆ. ಈ ಭಯೋತ್ಪಾದನೆಗಳಿಂದ ಹೊರಬರಬೇಕಿದೆ ಎಂದು ಹೇಳಿದ್ದಾರೆ ಕಂಗನಾ.
ನೋಯ್ಡಾ ಬಳಿ ಹೊಸದಾಗಿ ಚಿತ್ರನಗರಿ ಸ್ಥಾಪಿಸಲು ನಿರ್ಧರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನು ಸ್ವಾಗತಿಸಿರುವ ಕಂಗನಾ, ‘ಭಾರತದಲ್ಲಿ ಹಲವು ಚಿತ್ರರಂಗಗಳಿವೆ. ಇದರ ಬದಲಾಗಿ ಹಾಲಿವುಡ್ ಮಾದರಿಯಲ್ಲಿ ಒಂದೇ ಚಿತ್ರರಂಗವನ್ನು ರೂಪಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.
ಭಾಷಾವಾರು ಚಿತ್ರರಂಗಗಳು ಇರುವುದು ಸರಿಯಲ್ಲ. ಹಾಲಿವುಡ್ ಮಾದರಿಯಲ್ಲಿ ಒಂದೇ ಚಿತ್ರರಂಗವಿದ್ದರೆ ಅಭಿವೃದ್ಧಿಗೂ ಸಹಕಾರಿ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಎಲ್ಲಾ ಚಿತ್ರರಂಗಗಳನ್ನು ಒಂದೇ ವೇದಿಕೆಯಡಿ ತರಬೇಕು ಎಂದು ಪ್ರಧಾನಿ ಮಂತ್ರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕಂಗನಾ ಪ್ರಕಾರ ಬಾಲಿವುಡ್ ದೊಡ್ಡ ಚಿತ್ರರಂಗವಲ್ಲವಂತೆ. ತೆಲುಗು ಚಿತ್ರರಂಗವೇ ದೇಶದ ನಂಬರ್ ಒನ್ ಇಂಡಸ್ಟ್ರಿಯಾಗಿದೆ. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಡಿ ಹಲವು ಸಿನಿಮಾಗಳು ನಿರ್ಮಾಣವಾಗುತ್ತಿರುವುದೇ ಇದಕ್ಕೆ ನಿದರ್ಶನ. ಹಲವು ಹಿಂದಿ ಸಿನಿಮಾಗಳ ಶೂಟಿಂಗ್ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ನಡೆಯುತ್ತವೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.