ADVERTISEMENT

ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ, ಬದುಕೋದು ಕಷ್ಟ: ವೈದ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 6:45 IST
Last Updated 14 ಜೂನ್ 2021, 6:45 IST
ಸಂಚಾರಿ ವಿಜಯ್
ಸಂಚಾರಿ ವಿಜಯ್   

ಬೆಂಗಳೂರು: ಜೆ.ಪಿ. ನಗರದ 7ನೇ ಹಂತದಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದ್ದು, ಬದುಕುವುದು ಕಷ್ಟವೆಂದು ವೈದ್ಯರು ಹೇಳಿದ್ದಾರೆ.

ಸ್ನೇಹಿತ ನವೀನ್ ಜೊತೆ ಶನಿವಾರ ರಾತ್ರಿ ಬೈಕ್‌ನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿತ್ತು. ಮೆದುಳಿನ ಎರಡೂ ಭಾಗಕ್ಕೆ ಹೊಡೆತ ಬಿದ್ದು, ರಕ್ತ ಹೆಪ್ಪುಗಟ್ಟಿತ್ತು.

ಭಾನುವಾರ ಬೆಳಿಗ್ಗೆಯೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದ ಅಪೋಲೊ ಆಸ್ಪತ್ರೆ ವೈದ್ಯರು, ವಿಜಯ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ, ಇದುವರೆಗೂ ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ.

ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ ಅಪೋಲೊ ಆಸ್ಪತ್ರೆ ವೈದ್ಯ ಅರುಣ್, 'ಶಸ್ತ್ರಚಿಕಿತ್ಸೆ ಬಳಿಕವೂ ವಿಜಯ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ‌ ಕಂಡು ಬಂದಿಲ್ಲ. ಸದ್ಯಕ್ಕೆ ಹೆಚ್ಚು‌ ಮಾಹಿತಿ ನೀಡಲಾಗದು' ಎಂದರು.

ವಿಜಯ್ ತಮ್ಮ ಸಿದ್ದೇಶ್ ಕುಮಾರ್, ‘ಅಣ್ಣ ಬದುಕುವುದು ಕಷ್ಟವೆಂದು ವೈದ್ಯರು ಹೇಳುತ್ತಿದ್ದಾರೆ’ ಎಂದು ಕಣ್ಣೀರಿಟ್ಟರು.

‘ಮೆದುಳು ನಿಷ್ಕ್ರಿಯವಾಗಿದೆ ಎಂದೂ ವೈದ್ಯರು ತಿಳಿಸಿದ್ದಾರೆ. ಆ ರೀತಿಯಾದರೆ, ಅಣ್ಣನ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದೇವೆ’ ಎಂದೂ ತಿಳಿಸಿದರು.

ನಟ ನೀನಾಸಂ ಸತೀಶ್, ‘ಚಿಕಿತ್ಸೆಗೆ ವಿಜಯ್ ಸ್ಪಂದಿಸುತ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ. ‌ನನ್ನ ಅಣ್ಣನಿಗೂ ಇದೇ ರೀತಿ ಆಗಿತ್ತು. ಆತ ಕೆಲ ದಿನ ಬಿಟ್ಟು ಹುಷಾರಾಗಿದ್ದ. ವಿಜಯ್ ಸಹ ಹುಷಾರಾಗಿ ಬರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.