ADVERTISEMENT

Kabzaa: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ‘ಕಬ್ಜ’ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2023, 5:02 IST
Last Updated 16 ಮಾರ್ಚ್ 2023, 5:02 IST
‘ಕಬ್ಜ’ ಚಿತ್ರ ತಂಡ
‘ಕಬ್ಜ’ ಚಿತ್ರ ತಂಡ   

ಬೆಂಗಳೂರು: ಆರ್‌.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸ್ಟಾರ್‌ ನಟರಾದ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ನಟಿಸಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

‘ಕಬ್ಜ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್​​ 17ರಂದು (ಶುಕ್ರವಾರ) ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ಚಿತ್ರ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ಚಿತ್ರ ತಂಡ ತಿರುಪತಿಗೆ ತೆರಳಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಆರ್. ಚಂದ್ರು, ಉಪೇಂದ್ರ ಹಾಗೂ ಮೊದಲಾದವರು ವಿಮಾನದಲ್ಲಿ ತಿರುಪತಿಗೆ ತೆರಳಿದ್ದು, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಕಬ್ಜ’ ಸಿನಿಮಾದ ಟಿಕೆಟ್‌ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ‘ಕಬ್ಜ’ದಲ್ಲಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಟ್ರೇಲರ್ ನೋಡಿದ ಬಳಿಕ, ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆಯೊಂದು ಹುಟ್ಟಿದೆ. ‘ಕಬ್ಜ’ದ ಟೀಸರ್‌, ಪೋಸ್ಟರ್‌ಗಳಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಂಡಿದ್ದ ಉಪೇಂದ್ರ ಅವರ ಪಾತ್ರ, ಟ್ರೇಲರ್‌ನಲ್ಲಿ ಹೊಸ ರೂಪ ಪಡೆದಿದೆ. ಭಾರತೀಯ ವಾಯುಸೇನೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ‘ಅರ್ಕೇಶ್ವರ’ ಎಂಬ ಪಾತ್ರದಲ್ಲಿ ಉಪೇಂದ್ರ ಇಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಸುದೀಪ್‌ ಐಪಿಎಸ್‌ ಅಧಿಕಾರಿ ‘ಭಾರ್ಗವ್‌ ಭಕ್ಷಿ’ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ನಟ ಅಚ್ಯುತ್‌ ಕುಮಾರ್‌ ಅವರೂ ವಿಭಿನ್ನ ಗೆಟಪ್‌ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.