ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಂದ ವಿಭಿನ್ನ ಪ್ರಯೋಗ ನಡೆಯುತ್ತಿರುತ್ತದೆ. ಇದಕ್ಕೆ ಹೊಸ ಸೇರ್ಪಡೆ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಸಿನಿಮಾ. ಜನನಿ ಫಿಲಂಸ್ ಲಾಂಛನದಡಿ ನಿರ್ಮಾಪಕ ಪ್ರಶಾಂತ್ ಬಿ.ಜೆ. ಇದಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಲಾಕ್ಡೌನ್ ನಡುವೆಯೇ ಇತ್ತೀಚೆಗೆ ಬೆಂಗಳೂರಿನ ರೇಣು ಸ್ಟುಡಿಯೊದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯವೂ ಪೂರ್ಣಗೊಂಡಿತು.
‘ಶೀಘ್ರವೇ, ರೀರೆಕಾರ್ಡಿಂಗ್ ಪ್ರಕ್ರಿಯೆ ಆರಂಭವಾಗಲಿವೆ. ಕೊರೊನಾ ಭೀತಿಯ ಪರಿಣಾಮ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಪ್ರಸ್ತುತ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ಡೌನ್ ತೆರವಿಗೆ ಮುಂದಾಗಿದೆ. ಆಗಸ್ಟ್ ವೇಳೆಗೆ ಸಂಪೂರ್ಣವಾಗಿ ತೆರವುಗೊಂಡರೆ ಅದೇ ತಿಂಗಳಿನಲ್ಲಿಯೇ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ’ ಎಂದು ನಿರ್ಮಾಪಕ ಪ್ರಶಾಂತ್ ತಿಳಿಸಿದ್ದಾರೆ.
ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ರತ್ನ ತೀರ್ಥ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಬೆಂಗಳೂರು ಮತ್ತು ಸಕಲೇಶಪುರದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.
ಹಾರರ್ ಚಿತ್ರ ಇದು. ಪ್ರೀತಿ, ಪ್ರೇಮ ಹಾಗೂ ಯುವಕ, ಯುವತಿಯರ ಮನಸ್ಥಿತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.
‘ಟಗರು’ ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜಾ ಪಾತ್ರ ಮಾಡಿದ್ದ ತ್ರಿವೇಣಿ ಕೃಷ್ಣ ಈ ಚಿತ್ರದ ನಾಯಕಿ. ಶೌರ್ಯ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣವಿದೆ. ರಘುಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ.
ವಿಜಯ್ರಾಜ್ ಸಂಗೀತ ಸಂಯೋಜಿಸಿದ್ದಾರೆ.ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಉಜ್ವಲ್ ಸಂಕಲನ ನಿರ್ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.