ADVERTISEMENT

ವಿಚಾರಣೆ ನಡೆಸಿ ತೀರ್ಪು ಕೊಟ್ಟಿದ್ದೀರಿ: ಸುದ್ದಿವಾಹಿನಿಗಳಿಗೆ ಚಾಟಿ ಬೀಸಿದ ರಾಗಿಣಿ

ಡ್ರಗ್ಸ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 11:06 IST
Last Updated 27 ಫೆಬ್ರುವರಿ 2021, 11:06 IST
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ   

ಬೆಂಗಳೂರು: ಡ್ರಗ್ಸ್‌ ಪ್ರಕರಣ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ಕೊಡಬೇಕು ಎಂದು ಅನಿಸುತ್ತಿಲ್ಲ. ನಾನು ಯಾರು, ಏನು ಎಂಬುದು ಗೊತ್ತಿದೆ. ಅದನ್ನು ವಿವರಿಸಬೇಕಿಲ್ಲ...

ಇದು ನಟಿ ರಾಗಿಣಿ ದ್ವಿವೇದಿ ಅವರ ಕಟು ವ್ಯಂಗ್ಯದ ಮಾತು.

ಡ್ರಗ್ಸ್‌ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ದೀರ್ಘಕಾಲದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುದ್ದಿ ವಾಹಿನಿಗಳಿಗೆ ತಮ್ಮದೇ ಆದ ದಾಟಿಯಲ್ಲಿ ತೀವ್ರವಾಗಿ ಕುಟುಕಿದರು. ಕಟು ಆಕ್ರೋಶ ಅವರ ಮಾತು, ಮುಖಭಾವದಲ್ಲಿ ವ್ಯಕ್ತವಾಯಿತು.

ADVERTISEMENT

ಡ್ರಗ್ಸ್‌ ಪ್ರಕರಣದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಸುದ್ದಿ ವಾಹಿನಿಗಳು ಅದಾಗಲೇ ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿವೆ. ಶೀರ್ಷಿಕೆ, ಸಬ್‌ಟೈಟಲ್‌ಗಳನ್ನು ಕೊಟ್ಟು ನೀವೇ ವಿಚಾರಣೆ ಮುಂದುವರಿಸಿದಿರಿ. ನೀವೇ ತೀರ್ಪೂ ಕೊಟ್ಟಿರಿ. ನನ್ನ ಅವಶ್ಯಕತೆ ಬೇಕು ಎಂದಿದ್ದರೆ ನೀವು ಕಾಯಬೇಕಿತ್ತು. ನೀವಾಗಲೇ ಮುಂದುವರಿಸಿದ್ದೀರಿ. ಇನ್ನೂ ಮುಂದುವರಿಸಿ... ಎಂದು ವ್ಯಂಗ್ಯದ ನಗುವಲ್ಲೇ ಮನದ ಕಿಡಿ ಸ್ಫೋಟಿಸಿದರು.

ಚಿತ್ರಗಳ ಬಗ್ಗೆ ಮಾತನಾಡಿದ ರಾಗಿಣಿ, ‘2021ಕ್ಕೆ ಭಿನ್ನ ರೀತಿಯ ಚಿತ್ರಗಳನ್ನು ಕೊಡಬೇಕೆಂದಿದ್ದೆ. ಏಪ್ರಿಲ್‌ನಲ್ಲಿ ‘ನಾನೇ ನೆಕ್ಸ್ಟ್‌ ಸಿಎಂ’ ಚಿತ್ರ ಬರುತ್ತಿದೆ. ಅದರ ಪ್ರಚಾರವೂ ನಡೆದಿದೆ. ಶ್ರೀಸಾಮಾನ್ಯನ ಶಕ್ತಿಯನ್ನು ತೋರಿಸಲು ಪ್ರಯತ್ನಿಸಿದ್ದೇವೆ. ಗಾಂಧಿಗಿರಿ ಚಿತ್ರದ ಮಾತಿನ ಭಾಗ ಮುಗಿದಿದೆ’ ಎಂದರು.

ಆರ್‌ಡಿ ಫೌಂಡೇಷನ್‌ ಮೂಲಕ ಸಾಕಷ್ಟು ಸಮಾಜ ಸೇವೆ ಮಾಡುತ್ತಿದ್ದೇವೆ. ನನ್ನ ಇಡೀ ತಂಡಕ್ಕೆ ನಾನು ಆಭಾರಿ. ಸಂಕಷ್ಟದಲ್ಲಿ ಇದ್ದಾಗ ನನ್ನ ತಂಡದ ಎಲ್ಲರೂ ಧೈರ್ಯಕೊಟ್ಟರು. ಅವರೆಲ್ಲರಿಗೂ ಕೃತಜ್ಞಳಾಗಿದ್ದೇನೆ. ಮುಂದೆ ಮಹಿಳಾ ಸಬಲೀಕರಣ, ಶಿಕ್ಷಣ ಮಾನಸಿಕ ಸ್ವಾಸ್ಥ್ಯ ಸಂಬಂಧಿಸಿ ಒಂದಿಷ್ಟು ಕೆಲಸ ಮಾಡಬೇಕೆಂದಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.