ನರ್ತನ್ ನಿರ್ದೇಶನದ ‘ಮಫ್ತಿ’ ಚಿತ್ರದಲ್ಲಿನ ಭೈರತಿ ರಣಗಲ್ ಪಾತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಪಾತ್ರ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರಿಗೆ ಹೊಸ ಗತ್ತು ತಂದುಕೊಟ್ಟಿತ್ತು. ಇದೀಗ ‘ಮಫ್ತಿ’ಯ ಪ್ರೀಕ್ವೆಲ್ ‘ಭೈರತಿ ರಣಗಲ್’ ಸಿದ್ಧವಾಗುತ್ತಿದ್ದು, ಶಿವರಾಜ್ಕುಮಾರ್ ವಕೀಲರೊಬ್ಬರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ದೊರಕಿದೆ.
ಯುಗಾದಿಗೆ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ‘ಭೈರತಿ ರಣಗಲ್’ ಗ್ಯಾಂಗ್ಸ್ಟರ್ ಆಗಿದ್ದು ಹೇಗೆ? ಆ ಕಪ್ಪುಬಣ್ಣದ ಬಟ್ಟೆಯನ್ನು ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಈ ಹಿಂದೆ ನರ್ತನ್ ಸುಳಿವು ನೀಡಿದ್ದರು. ಇದಕ್ಕೆ ಪೂರಕವಾಗಿ ಇದೀಗ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಿವರಾಜ್ಕುಮಾರ್, ‘ಈ ಸ್ವಾತಂತ್ರ್ಯ ದಿನ, ನ್ಯಾಯದ ಬಣ್ಣ ಕಪ್ಪು ಆಗಿರಲಿದೆ’ ಎಂದಿದ್ದಾರೆ. ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ‘ಭೈರತಿ ರಣಗಲ್’ ಎಂಬ ಪಾತ್ರದ ಹಿನ್ನೋಟ ಈ ಪ್ರೀಕ್ವೆಲ್ನಲ್ಲಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.