ADVERTISEMENT

ಮತ್ತೆ ಕಟ್ಟಿದ ‘ಮಠ’: ಇಲ್ಲಿನ ಕಥೆಯೇ ಬೇರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 11:24 IST
Last Updated 14 ಜೂನ್ 2022, 11:24 IST
ಗುರುಪ್ರಸಾದ್‌, ತಬಲಾನಾಣಿ, ಸಾಧುಕೋಕಿಲ
ಗುರುಪ್ರಸಾದ್‌, ತಬಲಾನಾಣಿ, ಸಾಧುಕೋಕಿಲ   

ಮಠ...ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ. ಜಗ್ಗೇಶ್ ಹಾಗೂ ಗುರು ಪ್ರಸಾದ್ ಜುಗಲ್ ಬಂದಿಯ ಈ ಚಿತ್ರ ಪ್ರೇಕ್ಷಕರನ್ನು‌ ನಕ್ಕು ನಲಿಸಿದ್ದು ನೆನಪಿರಬಹುದು. ಇದೀಗ ಇದೇ ಹೆಸರಿನ ಸಿನಿಮಾ ಬರುತ್ತಿದೆ. ಹಾಗೆಂದು ಹಿಂದಿನ ಸಿನಿಮಾಗೂ ಇದಕ್ಕೂ ಸಂಬಂಧವಿಲ್ಲ. ಇದೇ ಬೇರೆ ಅದೇ ಬೇರೆ ಎಂದಿದೆ ಚಿತ್ರತಂಡ.

ಫಿಲಾಸಫಿಕಲ್, ಹಾಸ್ಯ, ಸತ್ಯ ಘಟನೆಯಾಧಾರಿತ ‘ಮಠ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. 82 ಜನ ಕಲಾವಿದರು ಇದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ.

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ADVERTISEMENT

‘ನಾನು ಸುಮಾರು 600 ರಿಂದ 700 ಸಿನಿಮಾ ಮಾಡಿರಬಹುದು. ಜಾಸ್ತಿ, ಕಡಿಮೆ ಎರಡು ಇರಬಹುದು. ಗುರು ಪ್ರಸಾದ್‌ ಅವರ ಮಠ ಸಿನಿಮಾದಲ್ಲಿ ನಾನು ಒಂದೆರೆಡು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆ ಎಲ್ಲವೂ ಹಿಟ್. ಈ ‘ಮಠ’ ಹೆಸರು ತೆಗೆದುಕೊಂಡಿದೆ. ಕಥಾವಸ್ತು ಬೇರೆ. ನಾನು ಪ್ರಮುಖ ಪಾತ್ರದಲ್ಲಿ ಇದ್ದೇನೆ. ಆದರೆ, ಅದು ಹಾಸ್ಯ ಪಾತ್ರ ಅಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌’ ಎಂದು ನಟ ಸಾಧುಕೋಕಿಲ ಹೇಳಿದರು.

ಗುರು ಪ್ರಸಾದ್ ಮಾತಾನಾಡಿ, ‘ಮನೆ ಕಟ್ಟುವುದು ಸುಲಭ. ಮಠ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡುವುದು ಕಷ್ಟ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ‘ಮಠ ಸಿನಿಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿದ್ವಿ. ಅವ್ರು ಗ್ರೀನ್ ಸಿಗ್ನಲ್ ಕೊಟ್ಟರು ಸಿನಿಮಾ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಜೀವನ್ ಗೌಡ ಛಾಯಾಗ್ರಹಣ, ರಾಜ್ಯಪ್ರಶಸ್ತಿ ವಿಜೇತ ಸಿ.ರವಿಚಂದ್ರನ್ ಸಂಕಲನ, ವಿ ಮನೋಹರ್ ಸಂಗೀತ ನಿರ್ದೇಶನ, ಯೋಗರಾಜ್ ಭಟ್ಟ್, ವಿ‌ ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯ ಸಿನಿಮಾಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.