ಬಹು ನಿರೀಕ್ಷಿತ ‘ಕಾಂತಾರ– ಅಧ್ಯಾಯ 1’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಅದರ ನಡುವೆ ತಂಡದಿಂದ ಹೊಸ ಅಪ್ಡೇಟ್ಗಳು ಸಿಗುತ್ತಿವೆ. ‘ಕಾಂತಾರ–1’ ದೈವದ ಮೂಲವನ್ನು ಹುಡುಕಿಕೊಂಡು ಹೋಗುವ ಕಥೆಯೆಂದು ಚಿತ್ರ ಸೆಟ್ಟೇರಿದಾಗಲೇ ಬರೆದಿದ್ದೆವು. ಚಿತ್ರ ಬಿಡುಗಡೆ ಸಿದ್ಧತೆಯಲ್ಲಿರುವ ಚಿತ್ರತಂಡ ಚಿತ್ರದ ಕಥಾಸಾರವನ್ನು ಬಹಿರಂಗಪಡಿಸಿದೆ. ಇನ್ನೊಂದೆಡೆ ಪಂಜಾಬ್ನ ಹೆಸರಾಂತ ಗಾಯಕ ದಿಲ್ಜಿತ್ ದೋಸಾಂಜ್ ‘ಕಾಂತಾರ– ಅಧ್ಯಾಯ 1’ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.
ಇತ್ತೀಚೆಗಷ್ಟೇ ನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ದಿಲ್ಜಿತ್ ದೋಸಾಂಜ್ ಭೇಟಿ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ದಿಲ್ಜಿತ್ ದೋಸಾಂಜ್ ಚಿತ್ರದ ಮ್ಯೂಸಿಕ್ ಆಲ್ಬಂಗಾಗಿ ಹಾಡಿದ್ದಾರೆ. ಹಾಡಿನ ರೆಕಾರ್ಡಿಂಗ್ ಇತ್ತೀಚೆಗಷ್ಟೇ ನಡೆದಿದೆ.
ಹೋಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರ ಅ.2ರಂದು ತೆರೆ ಕಾಣಲಿದೆ. ಈಗಾಗಲೇ ವಿದೇಶಗಳಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭಗೊಂಡಿದ್ದು, ಅಲ್ಲಿನ ಪ್ರೇಕ್ಷಕರಿಗೆ ಕಥೆಯ ತಿರುಳನ್ನು ಚಿತ್ರ ತಂಡ ಬಿಟ್ಟುಕೊಟ್ಟಿದೆ. ‘ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗುತ್ತದೆ. ನಾಗಾ ಸಾಧುವಾಗಿ, ಯೋಧನಾಗಿ ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ’ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.