ADVERTISEMENT

ನಾಳೆಯಿಂದ ಸಿನಿ ಕ್ರಿಕೆಟ್‌ ಹಬ್ಬ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:00 IST
Last Updated 22 ಫೆಬ್ರುವರಿ 2023, 22:00 IST
ಸುದೀಪ್‌
ಸುದೀಪ್‌   

ಕನ್ನಡ ಚಲನಚಿತ್ರ ಕಪ್‌(ಕೆಸಿಸಿ) 3ನೇ ಆವೃತ್ತಿಗೆ ಭರ್ಜರಿಯಾದ ಸಿದ್ಧತೆ ನಡೆದಿದ್ದು, ಶುಕ್ರವಾರ ಹಾಗೂ ಶನಿವಾರ
(ಫೆ.24–25) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಈ ಬಾರಿಯ ಕೆಸಿಸಿಯಲ್ಲಿ ಆರು ತಂಡಗಳಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ ಆಟಗಾರರಾದ ಬ್ರಯನ್‌ ಲಾರಾ, ಸುರೇಶ್‌ ರೈನಾ, ಕ್ರಿಸ್‌ ಗೇಲ್‌, ಬದರೀನಾಥ್‌, ಹರ್ಷಲ್‌ ಗಿಬ್ಸ್‌, ತಿಲಕರತ್ನೆ ದಿಲ್ಶಾನ್‌ ಈ ತಂಡಗಳಲ್ಲಿ ಆಡುತ್ತಿರುವುದು ವಿಶೇಷ. ಈ ಆಟಗಾರರು ಗುರುವಾರ(ಫೆ.23) ತಂಡ ಸೇರಿಕೊಳ್ಳಲಿದ್ದು, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್‌, ಸುದೀಪ್‌, ಗಣೇಶ್‌, ಧನಂಜಯ, ಧ್ರುವ ಸರ್ಜಾ ತಂಡಗಳು ಇಲ್ಲಿವೆ. ಕಾರ್ಯಕ್ರಮದ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ಸುದೀಪ್‌, ‘ಈ ವರ್ಷದ ಕೆಸಿಸಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎರಡನೇ ಆವೃತ್ತಿಯ ಎರಡೂ ದಿನಗಳ ಟಿಕೆಟ್‌ ಸಂಖ್ಯೆಗಿಂತ ದುಪ್ಪಟ್ಟು ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಆನ್‌ಲೈನ್‌ ಜೊತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ಸಂಖ್ಯೆ 18ರಲ್ಲಿ ಟಿಕೆಟ್‌ ಮಾರಾಟ ನಡೆಯುತ್ತಿದೆ. ಗುರುವಾರವೂ ಟಿಕೆಟ್‌ ಮಾರಾಟ ತೆರೆದಿರುವುದರಿಂದ ಈ ಬಾರಿ ಕ್ರೀಡಾಂಗಣ ಭರ್ತಿಯಾಗುವ ಎಲ್ಲ ಲಕ್ಷಣಗಳಿವೆ. ಮೊದಲ ದಿನ 3.30ಕ್ಕೆ ಮೊದಲ ಪಂದ್ಯಾವಳಿ ಆರಂಭವಾಗಲಿದೆ. ಜೀ ಪಿಕ್ಚರ್ಸ್‌ನಲ್ಲಿ ಪಂದ್ಯಾವಳಿಗಳ ನೇರ ಪ್ರಸಾರ ಇರಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಬಾವುಟಕ್ಕೆ ಸಂಬಂಧಿಸಿದ ವಿಶೇಷವಾದ ಕಾರ್ಯಕ್ರಮವೊಂದು ಇರಲಿದೆ’ ಎಂದರು.

ಮೂರನೇ ಆವೃತ್ತಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆಯನ್ನು ನೋಡಿ, ಮುಂದಿನ ಆವೃತ್ತಿಯನ್ನು ನಾಲ್ಕು ದಿನಕ್ಕೆ ವಿಸ್ತರಿಸುವ ಆಲೋಚನೆ ಇದೆ ಎಂದರು ಸುದೀಪ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.