ADVERTISEMENT

ಸುದೀಪ‌ ಟ್ವೀಟ್‌ ಅಳಿಸಿದ್ಯಾಕೆ? ’ಕಿಚ್ಚನ ತಿದ್ದಿದ ದರ್ಶನ್ ಫ್ಯಾನ್ಸ್’ ಎಂದವರಾರು?

​ಪ್ರಜಾವಾಣಿ ವಾರ್ತೆ
Published 4 ಮೇ 2020, 7:41 IST
Last Updated 4 ಮೇ 2020, 7:41 IST
ದರ್ಶನ್‌ ಮತ್ತು ಸುದೀಪ್‌
ದರ್ಶನ್‌ ಮತ್ತು ಸುದೀಪ್‌   
""

ಬೆಂಗಳೂರು: ಕಿಚ್ಚ ಸುದೀಪ್‌ ಅವರ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಡಿ ಬಾಸ್ ಖ್ಯಾತಿಯ ದರ್ಶನ್‌ ಮತ್ತು ಕಿಚ್ಚನ ಅಭಿಮಾನಿಗಳ ಕಿತ್ತಾಟಕ್ಕೆ ವೇದಿಕೆಯಾಗಿದೆ.

ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು ಟ್ರೋಲ್‌ಗಳ ಮೂಲಕ ಪರಸ್ಪರ ಕಿಚಾಯಿಸಿಕೊಳ್ಳುತ್ತಿದ್ದಾರೆ.

ಆಗಿದ್ದು ಏನು?

ADVERTISEMENT

ಭಾನುವಾರ ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ ಹಾಗೂ ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಕೆ. ಎಸ್. ನಿಸ್ಸಾರ್ ಅಹ್ಮದ್ ನಿಧನರಾದರು. ಈ ಸಂದರ್ಭದಲ್ಲಿ ನಟ ಸುದೀಪ್‌ ಕವಿಯ ನಿತ್ಯೋತ್ಸವ ಸಾಲುಗಳನ್ನು ಉಲ್ಲೇಖಿಸಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದರು.

ಸುದೀಪ್‌ ಅವರು ನಿತ್ಯೋತ್ಸವದ ಬದಲು 'ನಿತ್ಯೊತ್ಸವ' ಎಂದು ಬರೆದಿದ್ದರು. ಇದನ್ನೇ ನೆಪಮಾಡಿಕೊಂಡು ದರ್ಶನ್‌ ಅಭಿಮಾನಿಗಳು ಕಿಚ್ಚನನ್ನು ಕಿಚಾಯಿಸಿದ್ದಾರೆ. ಸುದೀಪ್‌ಗೆ ಕನ್ನಡ ಬರಲ್ಲ, ಕನ್ನಡ ಸರಿಯಾಗಿ ಬರೇ ಮಾರಾಯ!, ಮೊದಲು ಕನ್ನಡ ಕಲಿ ಎಂದು ದರ್ಶನ್‌ ಅಭಿಮಾನಿಗಳು ಟ್ರೋಲ್‌ ಮಾಡಿದ್ದಾರೆ. ಇದನ್ನು ಅರಿತ ಸುದೀಪ್‌ ಆ ಟ್ವೀಟ್‌ ಅನ್ನು ಅಳಿಸಿ ’ನಿತ್ಯೋತ್ಸವ’ ಪದವನ್ನು ಸರಿಯಾಗಿ ಬರೆದು ಮತ್ತೊಂದು ಟ್ವೀಟ್ ಮಾಡಿದರು.

ಇಷ್ಟಕ್ಕೂ ಸುಮ್ಮನಾಗದ ದರ್ಶನ್‌ ಅಭಿಮಾನಿಗಳು ಡಿ ಬಾಸ್‌ ಫ್ಯಾನ್ಸ್‌ಗೆ ಭಯ ಬಿದ್ದು ಸುದೀಪ್‌ ಟ್ವೀಟ್ ಅಳಿಸಿದ್ದಾರೆ ಎಂದು ಮತ್ತೆ ಟ್ರೋಲ್‌ ಮಾಡಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಅಭಿಮಾನಿಗಳು ಮತ್ತೆ ಕಿತ್ತಾಟವನ್ನು ಮುಂದುವರೆಸಿದ್ದಾರೆ.

'ಡಿ ಬಾಸ್ ಅಭಿಮಾನಿಗಳಿಗೆ ತಲೆ ಬಾಗಿಸಿದ ಸುದೀಪ್', 'ಕಿಚ್ಚನನ್ನು ತಿದ್ದಿದ ಡಿ ಬಾಸ್ ಅಭಿಮಾನಿಗಳು' ಎಂದು ದರ್ಶನ್‌ ಅಭಿಮಾನಿಗಳ ಟ್ರೋಲ್‌ಗಳು ಹರಿದಾಡುತ್ತಿವೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇಬ್ಬರು ನಟರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಈ ನಟರ ಅಭಿಮಾನಿಗಳು ಹಲವು ಫ್ಯಾನ್ಸ್‌ ಖಾತೆಗಳನ್ನು ತೆರೆದಿದ್ದು ದರ್ಶನ್‌ ಮತ್ತು ಸುದೀಪ್‌ ಅವರನ್ನು ಫಾಲೋಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.