
ನಟಿ ಕೃಷಿ ತಾಪಂಡ
ಚಿತ್ರಕೃಪೆ: ಇನ್ಸ್ಟಾಗ್ರಾಂ
ಬೆಂಗಳೂರು: ಚಂದನವನದ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಕೃಷಿ ತಾಪಂಡ, ನಿರ್ಮಾಪಕರೊಬ್ಬರ ವಿರುದ್ಧ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪದಡಿ ದೂರು ದಾಖಲಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ, ನಟಿ ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ.
ಸ್ಟೋರಿಯಲ್ಲಿ ‘ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ. ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಆದ್ರೆ ಯಾರನ್ನಾದರೂ ಕೆಡವೋ, ಕೀಳು ಮಾತಾಡೋ ಹಕ್ಕು ಯಾರಿಗೂ ಇಲ್ಲ. ಸೋಷಿಯಲ್ ಮೀಡಿಯಾದ ದ್ವೇಷ-ಬುಲ್ಲಿಯಿಂಗ್ ಎಲ್ಲರೂ ತಾಳಲು ಸಾಧ್ಯವಾಗುವುದಿಲ್ಲ. ನನ್ನ ಸುರಕ್ಷತೆ, ನನ್ನ ಮನಶಾಂತಿ ಮತ್ತು ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕೃಷಿ ಅವರು, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.