ಬೆಂಗಳೂರು: ಕಳೆದ ಶುಕ್ರವಾರವಷ್ಟೇ ತೆರೆಕಂಡಿದ್ದ ನಟ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲು ಚಿತ್ರತಂಡವು ತೀರ್ಮಾನಿಸಿದೆ.
ವಿಜಯಾನಂದ್ ನಿರ್ದೇಶನದ ಈ ಚಿತ್ರ ಒಳ್ಳೆಯ ಆರಂಭಪಡೆದುಕೊಂಡು ಪ್ರೇಕ್ಷಕರ ಮನಗೆದ್ದಿದೆ. ಆದರೆ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ.
‘ಸರ್ಕಾರ ಕೂಡ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡುವ ಸಾಧ್ಯತೆಯಿದೆ. ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ನೋಡೋಣ. ಜನರ ಜೀವನವೇ ಮುಖ್ಯ. ಹೀಗಾಗಿ ಏಪ್ರಿಲ್ 22ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಚಿತ್ರದ ನಿರ್ಮಾಪಕ ಗೋವಿಂದರಾಜು ಹೇಳಿದ್ದಾರೆ.
‘ಒಂದು ವೇಳೆ ಸರ್ಕಾರ ತಕ್ಷಣದಿಂದಲೇ, ಅಥವಾ ಇಂತಹ ದಿನದಿಂದ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ’ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ ಪರಿಸ್ಥಿತಿ ಮತ್ತೆ ಸುಧಾರಿಸಿದ ಬಳಿಕ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.