ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್ನಡಿ ನಿರ್ಮಾಣ ಮಾಡುತ್ತಿರುವ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ‘ಲಕ್ಷ್ಮೀಪುತ್ರ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು.
ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಜಯ್ ಎಸ್.ಸ್ವಾಮಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಲಕ್ಷ್ಮೀಪುತ್ರ ಕೋವಿಡ್ ಸಮಯದಲ್ಲಿ ಮಾಡಿದ ಕಥೆ. ತಾಯಿ ಮಗನಿಗೆ ಸಂಬಂಧಿಸಿದ ಕಥೆ’ ಎನ್ನುತ್ತಾರೆ ಎ.ಪಿ.ಅರ್ಜುನ್.
‘ಕಳೆದ ವರ್ಷದ ಜನವರಿಯಲ್ಲಿ ‘ಉಪಾಧ್ಯಕ್ಷ’ ರಿಲೀಸ್ ಆಗಿತ್ತು. ಈ ವರ್ಷದ ಜನವರಿಯಲ್ಲಿ ‘ಲಕ್ಷ್ಮೀಪುತ್ರ’ ಮುಹೂರ್ತ ಆಗಿದೆ. ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ವರ್ಷವೇ ಆಯಿತು. ‘ಉಪಾಧ್ಯಕ್ಷ’ ಚಿತ್ರ ನೋಡಲು ಹೆಚ್ಚಿನವರು ಕುಟುಂಬ ಸಹಿತವಾಗಿ ಬಂದಿದ್ದರು. ಆಗ ನನ್ನ ಸಿನಿಮಾ ನೋಡಲು ಇಡೀ ಕುಟುಂಬವೇ ಬರುತ್ತದೆ ಎಂದು ತಿಳಿದುಕೊಂಡೆ. ಹೀಗಾಗಿ ಮುಂದಿನ ಚಿತ್ರ ಒಳ್ಳೆಯ ಕೌಟುಂಬಿಕ ಚಿತ್ರವಾಗಿರಬೇಕು ಎಂದುಕೊಂಡೆ. ಆಗ ಸಿಕ್ಕಿದ್ದು ‘ಲಕ್ಷ್ಮೀಪುತ್ರ’. ಯುವಜನತೆ ಹಾಗೂ ಇಡೀ ಕುಟುಂಬವೇ ನೋಡುವ ಸಿನಿಮಾ ಇದಾಗಿದೆ’ ಎಂದರು ಚಿಕ್ಕಣ್ಣ.
ಚಿತ್ರಕ್ಕೆ ಗಿರೀಶ್ ಆರ್. ಗೌಡ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ, ಕೆ.ರವಿವರ್ಮಾ ಸಾಹಸ ನಿರ್ದೇಶನವಿದೆ. ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತಾರಾ ಅನುರಾಧ, ಧರ್ಮಣ್ಣ ಕಡೂರು ಹಾಗೂ ಕುರಿ ಪ್ರತಾಪ್ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.