
ಅಯ್ಯಪ್ಪ ಸ್ವಾಮಿ ಕುರಿತಾದ ಕಥೆಯನ್ನು ಹೊಂದಿರುವ ‘ಮಣಿಕಂಠ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಕಾಶಿಯಿಂದ ಎಂಟು ನಾಗಾ ಸಾಧುಗಳು ಬಂದು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಸಂತೋಷ್ ಸಿಂಹ ಕಥೆ ಬರೆದು, ನಿರ್ದೇಶಿಸುತ್ತಿದ್ದಾರೆ. ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಮಣಿಕಂಠನು ಜೀವನದಲ್ಲಿ ಆವರಿಸಿಕೊಂಡು ಪವಾಡ ಮಾಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ಹುಡುಕುತ್ತಾ ಹೋದರೆ ಮುಗಿಯುವುದಿಲ್ಲ. ಇಪ್ಪತ್ತೈದು ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿ ದರ್ಶನ ಮಾಡಿದ್ದೇನೆ. ಈ ಚಿತ್ರದ ಮೂಲಕ ನನ್ನ ಬದುಕಲ್ಲಿ ನಡೆದಂಥ ಸತ್ಯ ಘಟನೆಗಳು, ಸ್ವಾಮಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮಾಲಾಧಾರಿಗಳು ತೊಂದರೆಗೆ ಸಿಲುಕಿಕೊಂಡಾಗ ಕರಪುಸ್ವಾಮಿ ಹೇಗೆ ಕಾಪಾಡುತ್ತಾನೆ ಎಂಬದನ್ನೂ ಕೂಡ ಚಿತ್ರದಲ್ಲಿ ತೋರಿಸುತ್ತೇವೆ’ ಎಂದರು ನಿರ್ದೇಶಕ.
ಅಶ್ವಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ಅಶ್ವಿನಿ ಸಂತೋಷ್ ಸಿಂಹ ನಿರ್ಮಾಣ ಮಾಡುವುದರ ಜತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀವನ್ ಸಿಂಹ, ತನುಶ್ರೀ ಸಿಂಹ, ಬಿ.ಎಸ್.ಮಂಜುಳಾ, ವೈಷ್ಣವಿ ಎಸ್.ಡಿ ಮುಂತಾದವರು ಚಿತ್ರದಲ್ಲಿದ್ದಾರೆ. ಚೇತನ್ಕುಮಾರ್ ಸಾಹಿತ್ಯದ ಐದು ಗೀತೆಗಳಿಗೆ ಸ್ವರೂಪ್ ಆರ್ ಸಂಗೀತ ಸಂಯೋಜಿಸುತಿದ್ದಾರೆ. ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್ ಅವರದ್ದು.
ಬೆಂಗಳೂರು, ಶಬರಿಮಲೆ, ಪಂಪ ನದಿ, ದೊಡ್ಡಪಾದ ಮುಂತಾದೆಡೆ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.