ADVERTISEMENT

ಗ್ರಂಥಾಲಯದಲ್ಲಿ ಸಂಸದರ ಕಚೇರಿ: ಪೋಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 20:34 IST
Last Updated 19 ಸೆಪ್ಟೆಂಬರ್ 2019, 20:34 IST
ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ನಿರ್ಮಾಣಕ್ಕಾಗಿ ಗ್ರಂಥಾಲಯದ ನೆಲಮಹಡಿಯನ್ನು ನವೀಕರಣ ಮಾಡಲಾಗುತ್ತಿದೆ – ಪ್ರಜಾವಾಣಿ ಚಿತ್ರ
ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ನಿರ್ಮಾಣಕ್ಕಾಗಿ ಗ್ರಂಥಾಲಯದ ನೆಲಮಹಡಿಯನ್ನು ನವೀಕರಣ ಮಾಡಲಾಗುತ್ತಿದೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಯನಗರ 5ನೇ ಹಂತದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಜಾಗವನ್ನೇ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ನಿರ್ಮಾಣಕ್ಕೆ ನೀಡಲಾಗಿದ್ದು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿಗೆ ಸೇರಿದ್ದ ಜಾಗದಲ್ಲಿ ಎರಡು ಅಂತಸ್ತಿನ ಗ್ರಂಥಾಲಯ ಕಟ್ಟಡವಿದೆ. ಮೊದಲ ಹಾಗೂ ಎರಡನೇ ಅಂತಸ್ತಿನ ಕೊಠಡಿಯಲ್ಲಿ ದಿನಪತ್ರಿಕೆ ಹಾಗೂ ಪುಸ್ತಕಗಳ ಓದಿಗೆ ಅವಕಾಶವಿದೆ. ನೆಲ ಮಹಡಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿನಿತ್ಯವೂ ಸಂಜೆ ಉಚಿತ ತರಬೇತಿ ಶಿಬಿರ ನಡೆಸಲಾಗುತ್ತದೆ.

ನೆಲಮಹಡಿ ಜಾಗವನ್ನೇ ಸಂಸದ ಕಚೇರಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಬಿಬಿಎಂಪಿ ಈಗಾಗಲೇ ಅನುಮತಿ ನೀಡಿದ್ದು, ನವೀಕರಣ ಕೆಲಸ ಆರಂಭವಾಗಿದೆ. ಇದರಿಂದಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತರಬೇತಿ ಶಿಬಿರ ಸ್ಥಗಿತಗೊಳ್ಳಲಿದೆ.

ADVERTISEMENT

‘ನಮ್ಮ ಸಂಸದರೇ ಗ್ರಂಥಾಲಯದ ಜಾಗವನ್ನು ಕಬಳಿಸುತ್ತಿದ್ದಾರೆ. ಇನ್ನು ಮುಂದೆ ನಮ್ಮ ಮಕ್ಕಳು ಯಾವ ಸ್ಥಳದಲ್ಲಿ ತರಬೇತಿ ಪಡೆಯಬೇಕು’ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಬಿಬಿಎಂಪಿ ಅಧಿಕಾರಿಯೊಬ್ಬರು, ‘ದಿವಂಗತ ಎನ್‌. ವಿಜಯ್‌ಕುಮಾರ್ ಅವರು ಶಾಸಕರಾಗಿದ್ದ ವೇಳೆ ಜಯನಗರ ಶೈಕ್ಷಣಿಕ ಸಮಿತಿಗೆ ಈ ಹಿಂದೆ ಜಾಗವನ್ನು ನೀಡಲಾಗಿತ್ತು. ಒಪ್ಪಂದದ ಅವಧಿ 2019ರ ಮಾರ್ಚ್‌ನಲ್ಲೇ ಮುಗಿದಿದೆ. ಈಗ ಬೇರೊಂದು ಟ್ರಸ್ಟ್‌ಗೆ ಬಿಬಿಎಂಪಿ ಕೌನ್ಸಿಲ್ ಸಭೆಯೇ ಜಾಗ ಮಂಜೂರು ಮಾಡಿದೆ’ ಎಂದು ಮಾಹಿತಿ ನೀಡಿದರು.

ಆರ್‌ಟಿಐ ಹೋರಾಟಗಾರ ಮರಿಲಿಂಗೇಗೌಡ ಮಾಲಿ ಪಾಟೀಲ, ‘ವಿದ್ಯಾರ್ಥಿಗಳಿಗೆ ಆಗುವ ತೊಂದರೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.