ಬೆಂಗಳೂರು: ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೈಗೊಂಡಿರುವ ‘40 ಪರ್ಸೆಂಟ್ ಸರ್ಕಾರ’ ಅಭಿಯಾನಕ್ಕೆ ಒಪ್ಪಿಗೆಯನ್ನೇ ಪಡೆಯದೇ ತಮ್ಮ ಚಿತ್ರ ಬಳಸಿಕೊಳ್ಳಲಾಗಿದೆ ಎಂದು ನಟ ಅಖಿಲ್ ಅಯ್ಯರ್ ಆರೋಪಿಸಿದ್ದಾರೆ.
ತಮ್ಮ ಭಾವಚಿತ್ರ ಬಳಸಿ ಕಾಂಗ್ರೆಸ್ ರಚಿಸಿರುವ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅಖಿಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನನ್ನ ಚಿತ್ರವನ್ನು ಕಾನೂನುಬಾಹಿರವಾಗಿ ಮತ್ತು ನನ್ನ ಒಪ್ಪಿಗೆಯಿಲ್ಲದೆ ‘40% ಸರ್ಕಾರ’ ಅಭಿಯಾನಕ್ಕಾಗಿ ಬಳಸುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ಕಾಂಗ್ರೆಸ್ನ ಈ ಅಭಿಯಾನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಐಎನ್ಸಿ ಕರ್ನಾಟಕ ದಯವಿಟ್ಟು ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಕಾಂಗ್ರೆಸ್, ‘40 ಪರ್ಸೆಂಟ್ ಸರ್ಕಾರ’ ಎಂದು ಟೀಕೆ ಮಾಡಿದೆ. ಇದೇ ಹ್ಯಾಷ್ಟ್ಯಾಗ್ ಅಡಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲೂ ಅಭಿಯಾನ ನಡೆಸುತ್ತಿದೆ.
ಹಿಂದಿಯ ಕೆಲ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಅಖಿಲ್ ಅಯ್ಯರ್ ನೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.