ADVERTISEMENT

ಮುಂಬೈ ಚಲನಚಿತ್ರೋತ್ಸವಕ್ಕೆ ಪ್ರವೇಶ ಪಡೆದ ‘ನಾತಿಚರಾಮಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 12:13 IST
Last Updated 24 ಸೆಪ್ಟೆಂಬರ್ 2018, 12:13 IST
‘ನಾತಿಚರಾಮಿ’ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ಶ್ರುತಿ ಹರಿಹರನ್
‘ನಾತಿಚರಾಮಿ’ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ಶ್ರುತಿ ಹರಿಹರನ್   

ಬೆಂಗಳೂರು: ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ (ಎಂಎಎಂಐ) ಸಂಸ್ಥೆಯುಪ್ರತಿವರ್ಷ ಏರ್ಪಡಿಸುವ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಕನ್ನಡದ ’ನಾತಿಚರಾಮಿ’,ಇಂಡಿಯನ್‌ ಸ್ಟೋರಿಸ್ ವಿಭಾಗದಲ್ಲಿ ಪ್ರವೇಶ ಪಡೆದುಕೊಂಡಿದೆ. ಆಕ್ಸ್‌ಫಾಮ್ (Oxfam) ಪ್ರಶಸ್ತಿ ವಿಭಾಗದಲ್ಲಿ ಸ್ಪರ್ಧೆಯಲ್ಲಿದೆ.

ಮಂಸೋರೆ

‘ಆಕ್ಸ್‌ಫಾಮ್ ಇಂಡಿಯಾ ಬೆಸ್ಟ್ ಫಿಲಂ ಆನ್ ಜೆಂಡರ್ ಈಕ್ವಾಲಿಟಿ’ (Oxfam India 'Best film on Gender Equality) ಶೀರ್ಷಿಕೆಯಡಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಮೊದಲಬಾರಿಗೆ ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ ಸ್ಥಾಪನೆಯಲ್ಲಿ ಚಲನಚಿತ್ರಕ್ಕೆ ಇರುವ ಶಕ್ತಿಯನ್ನು ಗುರುತಿಸಲಾಗಿದೆ. ಲಿಂಗಸಮಾನತೆ ಉತ್ತೇಜಿಸುವ ನಿಟ್ಟಿನಲ್ಲಿ ಸಾಮಾಜಿಕ ರೂಢಿಗಳನ್ನು ಕುರಿತು ಉತ್ತಮ ಚಿತ್ರಗಳನ್ನು ಮಾಡುವ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಈ ಬಹುಮಾನವನ್ನು ಕೊಡಲಾಗುತ್ತದೆ.

‘ಸಣ್ಣ ಎಳೆಯೊಂದು ಕಥೆಯಾಗಿ, ದೃಶ್ಯಮಾಧ್ಯಮದಲ್ಲಿ ರೂಪ ತಳೆದು ‘ನಾತಿಚರಾಮಿ’ ಚಲನಚಿತ್ರ ಸಿದ್ಧವಾಯಿತು. ಆ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರರಸಿಕರ, ಚಿತ್ರೋದ್ಯಮದವರ ಎದುರಿನಲ್ಲಿ ಪ್ರದರ್ಶನದ ಅವಕಾಶ ಸಿಗುವುದಕ್ಕಿಂತ ಹೆಚ್ಚಿನ ಸಾರ್ಥಕತೆ ಇನ್ನೇನಿದ್ದೀತು?’ ಎಂದು ನಿರ್ದೇಶಕ ಮಂಸೋರೆ ಪ್ರತಿಕ್ರಿಯಿಸಿದರು.

ADVERTISEMENT
‘ನಾತಿಚರಾಮಿ’ ಚಿತ್ರದಲ್ಲಿ ಶ್ರುತಿ ಹರಿಹರನ್, ಸಂಚಾರಿ ವಿಜಯ್

ಹೆಣ್ಣಿನ ಸಂಕಟದ ಕಥೆ

ನಗರದ ಒತ್ತಡದ ಬದುಕಿನ ನಡುವೆ ಹೆಣ್ಣೊಬ್ಬಳು ಅನುಭವಿಸುವ ಸಂಕಟಗಳನ್ನು ಕಥೆಯ ರೂಪದಲ್ಲಿ ಹೇಳುವ ಯತ್ನ ‘ನಾತಿಚರಾಮಿ’. ಮದುವೆ ಸಂದರ್ಭದಲ್ಲಿ ಹೇಳುವ ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ’ ಎನ್ನುವ ಸಾಲಿನ ಕೊನೆಯ ಪದವನ್ನು ಅವರು ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ಈ ಚಿತ್ರದಲ್ಲಿ ಬರುವ ಗೌರಿ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದರೂ, ವೈಯಕ್ತಿಕ ಜೀವನದಲ್ಲಿ ತೊಂದರೆ ಎದುರಿಸುವ ಹೆಣ್ಣು.

ನಾತಿಚರಾಮಿ ಅಂದರೆ ವಚನ ನೀಡುವುದು ಎಂಬ ಅರ್ಥ ಇದೆ. ವಚನ ನೀಡುವುದರ ಇನ್ನೊಂದು ಮುಖವನ್ನು ಹುಡುಕಲು ಯತ್ನಿಸುತ್ತಿದ್ದೇನೆ. ಬೆಂಗಳೂರಿನಲ್ಲಿ ಬದುಕು ಸಾಗಿಸುವ ಗೌರಿ ಎನ್ನುವ ಹೆಣ್ಣುಮಗಳ ಮೇಲೆ ಇಲ್ಲಿನ ಜೀವನಶೈಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳುವುದು ಈ ಚಿತ್ರ. ‘ಮದುವೆ ಎಂಬ ವ್ಯವಸ್ಥೆ ಏನು ಎಂಬ ಬಗ್ಗೆ ನಮ್ಮೊಳಗಿನ ಹುಡುಕಾಟವೂ ಹೌದು ಈ ಚಿತ್ರ’ ಎನ್ನುವುದು ಚಿತ್ರದ ನಾಯಕಿ ಶ್ರುತಿ ಹರಿಹರನ್ ಅವರ ಅಭಿಪ್ರಾಯ.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದು ಹೆಣ್ಣಿನ ಕಥೆ ಇದು. ಈ ಸಿನಿಮಾದ ಸ್ಕ್ರಿಪ್ಟ್‌ ನನ್ನೆದುರು ಬಂದಾಗ, ನನಗೊಂದು ಒಳ್ಳೆಯ ಅವಕಾಶ ಸಿಕ್ಕಿದೆ ಎಂದೇ ಭಾವಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನನ್ನೊಳಗೆ ಒಂದು ಬದಲಾವಣೆ ನಡೆದಿದೆ. ನನ್ನಲ್ಲಿ ಪಕ್ವತೆ ಬಂದಿದೆ. ನನ್ನೊಳಗಿನ ಭಾವನೆಗಳನ್ನು ಅಭಿವ್ಯಕ್ತಿಸಲು ಈ ಸಿನಿಮಾ ಒಳ್ಳೆಯ ಅವಕಾಶ’ ಎಂದು ಶ್ರುತಿ ಹೇಳಿದ್ದರು.

‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಈ ಚಿತ್ರದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.