ಗಾಯಕ ನವೀನ್ ಸಜ್ಜು ಹಾಡಿರುವ ‘ಏನ್ ಚಂದನ ತಕಾ’ ಹಾಡು ವಿವಾದಕ್ಕೆ ಕಾರಣವಾಗಿದೆ.
ಇದು ‘ಬಡ್ಡಿ ಮಗನ್ ಲೈಫು’ ಚಿತ್ರದ ಹಾಡು. ಸಾಮಾಜಿಕ ಜಾಲತಾಣದಲ್ಲಿ ಈ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇಲ್ಲಿಯವರೆಗೂ 15 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಕೇಳಿದ್ದಾರೆ.
‘ಈ ಹಾಡಿನ ಮೂಲಕ ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆ ಮಾಡಲಾಗಿದೆ. ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯದ ಕ್ಷಮೆ ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ, ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನವೀನ್ ಸಜ್ಜು, ‘ನಾನು ಗಾಯಕ, ಒಬ್ಬರು ಹಾಡಿದ್ದಾರೆ. ಒಬ್ಬರು ಸಾಹಿತ್ಯ ಬರೆದಿದ್ದಾರೆ. ಮತ್ತೊಬ್ಬರು ಸಂಗೀತ ನಿರ್ದೇಶಿಸಿದ್ದಾರೆ. ಸಾಂಗ್ ಮೂಲಕ ಹೆಣ್ಣುಮಕ್ಕಳ ತೇಜೋವಧೆ ಮಾಡಿಲ್ಲ’ ಎಂದು ಹೇಳಿದ್ದಾರೆ.
‘ಎಲ್ಲ ಜನಾಂಗದಲ್ಲೂ ಗೌಡ್ರು ಇರುತ್ತಾರೆ. ಗೌಡ್ರು ಅಂದರೆ ಮುಖ್ಯಸ್ಥ, ಯಜಮಾನ ಎಂದರ್ಥ. ಹಾಡಿನ ಮೂಲಕ ಯಾರಿಗೂ ಅವಮಾನ ಮಾಡುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.