ಕಥೆಯ ಗುಟ್ಟನ್ನು ಒಂಚೂರೂ ಬಿಟ್ಟುಕೊಡದೆ ಬಂದಿರುವ ‘ನೀವು ಕರೆ ಮಾಡಿರುವ ಚಂದಾದಾರರು’ ಸಿನಿಮಾ ಮುಂದಿನ ವಾರ (ನ. 23) ವೀಕ್ಷಕರ ಮುಂದೆ ಬರಲಿದೆ.
ಈ ಸಿನಿಮಾದ ಟ್ರೇಲರ್ ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಿತ್ತು. ಆದರೆ, ಸಿನಿಮಾ ತೆರೆಗೆ ಬರುವುದು ಕೊಂಚ ತಡ ಆಯಿತು. ಅದಕ್ಕೆ ಒಂದು ಕಾರಣವೂ ಇದೆ. ಸಿದ್ಧವಾಗಿದ್ದ ಸಿನಿಮಾವನ್ನು ಕೆಲವು ಆಪ್ತರಿಗೆ ತೋರಿಸಿದ ಚಿತ್ರತಂಡ, ಅವರಿಂದ ಒಂದಿಷ್ಟು ಸಲಹೆ ಪಡೆಯಿತು. ಬಂದ ಸಲಹೆಗಳನ್ನು ಆಧರಿಸಿ ಸಿನಿಮಾದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ.
‘ಸಾಮಾಜಿಕ ಸಂದೇಶವೊಂದನ್ನು ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಜನರ ಮುಂದೆ ಇಡುವ ಪ್ರಯತ್ನ ಇದು. ದೂರವಾಣಿಯಿಂದ ಆಗುವ ಪರಿಣಾಮಗಳೇ ಸಿನಿಮಾದ ಕಥಾವಸ್ತು’ ಎಂದರು ನಿರ್ದೇಶಕ ಮೋನಿಶ್ ಸಿ.
ಕೊಡಗಿನಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದ ಚಿತ್ರತಂಡ, ಸಿನಿಮಾದ ಒಂದು ಪ್ರತಿಯನ್ನು ಸಿದ್ಧಪಡಿಸಿತ್ತು. ಕೆಲವು ದೃಶ್ಯಗಳು ಸಮಾಧಾನ ತರಲಿಲ್ಲವಾದ ಕಾರಣ, ಅವುಗಳನ್ನು ಪುನಃ ಚಿತ್ರೀಕರಿಸಲಾಯಿತು ಎನ್ನುತ್ತಾರೆ ಅವರು.
ನಿರ್ಮಾಪಕ ಸನತ್ ಕುಮಾರ್, ‘ಯುವಕರು ಈ ಸಿನಿಮಾ ವೀಕ್ಷಿಸಬೇಕು. ಉತ್ತರ ಕರ್ನಾಟಕದಲ್ಲಿ ನಡೆದ ಒಂದು ಘಟನೆ ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಒಂದು ದೃಷ್ಟಾಂತ ಕೂಡ ಈ ಚಿತ್ರಕ್ಕೆ ಪ್ರೇರಣೆ’ ಎಂದು ಮಾಹಿತಿ ನೀಡಿದರು.
ನಟಿ ಶಿಲ್ಪಾ ಮಂಜುನಾಥ್ ಈ ಚಿತ್ರದ ನಾಯಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.