ADVERTISEMENT

'ಬಯಲುಸೀಮೆ’ಯಲ್ಲಿ ‘ಟೋಬಿ’ ಪಯಣ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 0:30 IST
Last Updated 25 ಆಗಸ್ಟ್ 2023, 0:30 IST
ಸಂಯುಕ್ತ ಹೊರನಾಡು 
ಸಂಯುಕ್ತ ಹೊರನಾಡು    

ರಾಜ್‌ ಬಿ.ಶೆಟ್ಟಿ ನಟನೆಯ ಸಿನಿಮಾ ‘ಟೋಬಿ’ ಹಾಗೂ ಉತ್ತರ ಕರ್ನಾಟಕ ಸೊಗಡಿನ ಮತ್ತೊಂದು ಸಿನಿಮಾ ‘ಬಯಲುಸೀಮೆ’ ಇಂದು ಬಿಡುಗಡೆಯಾಗುತ್ತಿದೆ. 

ಟೋಬಿ:

ರಾಜ್‌ ಬಿ.ಶೆಟ್ಟಿ, ಚೈತ್ರ ಜೆ.ಆಚಾರ್‌ ಹಾಗೂ ಸಂಯುಕ್ತ ಹೊರನಾಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಇದು. ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಯಶಸ್ಸಿನ ಬಳಿಕ ರಾಜ್‌ ನಟಿಸಿರುವ ಈ ಸಿನಿಮಾ ರಾಜ್ಯದ 175 ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ 60 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು!’ ಎನ್ನುವ ಟ್ಯಾಗ್‌ಲೈನ್‌ ಇರುವ ‘ಟೋಬಿ’ಗೆ ಬಾಸಿಲ್‌ ಅಲ್ಚಲಕ್ಕಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ADVERTISEMENT

ಸಿನಿಮಾದ ಮೂಲ ಕಥೆಯನ್ನು ಟಿ.ಕೆ.ದಯಾನಂದ್‌ ಬರೆದಿದ್ದಾರೆ. ರಾಜ್‌ ಬಿ.ಶೆಟ್ಟಿ ಇದನ್ನು ವಿಸ್ತರಿಸಿದ್ದು, ನಟಿಸುವುದರ ಜೊತೆಗೆ ನಿರ್ದೇಶನದತ್ತಲೂ ಗಮನಹರಿಸಿದ್ದಾರೆ. ಈ ಹಿಂದೆ ‘ಲೈಟರ್‌ ಬುದ್ಧ ಫಿಲ್ಮ್ಸ್‌ನಡಿ ನಿರ್ಮಾಣವಾದ ರಾಜ್‌ ಬಿ.ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ರವಿ ರೈ ಕಳಸ ಅವರೇ ‘ಟೋಬಿ’ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ರಾಜ್ಯದಾದ್ಯಂತ ವಿತರಣೆ ಮಾಡಲಿದೆ. ಚಿತ್ರಕ್ಕೆ ಮಿದುನ್‌ ಮುಕುಂದನ್‌ ಸಂಗೀತ ನಿರ್ದೇಶನವಿದ್ದು, ಪ್ರವೀಣ್‌ ಶ್ರೀಯನ್ ಛಾಯಾಗ್ರಹಣವಿದೆ. ‘ಗರುಡ ಗಮನ..’ ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ಇದೇ ತಂಡ ಕಾರ್ಯನಿರ್ವಹಿಸಿತ್ತು.

ಬಯಲುಸೀಮೆ:

ಉತ್ತರ ಕರ್ನಾಟಕದ ಸೊಗಡು ಹೊಂದಿರುವ ‘ಕ್ಷೇತ್ರಪತಿ’ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಂದರ್ಭದಲ್ಲೇ ಇದೇ ಮಾದರಿಯ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ವರುಣ್‌ ಕಟ್ಟಿಮನಿ ನಿರ್ದೇಶನದ ಈ ಸಿನಿಮಾ, ರಾಜಕೀಯ ಮೇಲಾಟದ ಸುತ್ತ ಸಾಗುತ್ತದೆ. ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ವರುಣ್‌ ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಸಂಯುಕ್ತ ಹೊರನಾಡು ನಾಯಕಿಯಾಗಿದ್ದು, ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿಆರ್‌ಎಸ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

‘ಕದ್ದ ಚಿತ್ರ’ ಮುಂದಕ್ಕೆ:

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ನಿಧನದ ಕಾರಣ, ವಿಜಯ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ನಿಗದಿಯಂತೆ ಆ.25ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ. ಸುಹಾಸ್‌ ಕೃಷ್ಣ ನಿರ್ದೇಶನದ ಈ ಚಿತ್ರವು, ಕೃತಿ ಚೌರ್ಯದ ಕಥಾಹಂದರವನ್ನು ಹೊಂದಿದ ಸೈಕಾಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದೆ. 

ರಾಜ್‌ ಬಿ. ಶೆಟ್ಟಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.