ADVERTISEMENT

ಚಿತ್ರ ನಿರ್ಮಾಣದತ್ತ ನಿಖಿಲ್‌ ಕುಮಾರಸ್ವಾಮಿ ಒಲವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 17:24 IST
Last Updated 21 ಜುಲೈ 2020, 17:24 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ    

ನಟ ಕಮ್‌ ಯುವ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಈಗ ಸಿನಿಮಾ ನಿರ್ಮಾಣದತ್ತ ಒಲವು ಮೂಡಿದೆ.

ಚಿತ್ರ ನಿರ್ಮಾಣಕ್ಕಾಗಿಯೇ ಅವರು ಎನ್‌ಕೆ ಎಂಟರ್‌ಟೈನ್‌ಮೆಂಟ್ಸ್‌ಬ್ಯಾನರ್ ಹುಟ್ಟುಹಾಕಿದ್ದು, ಲಹರಿ ಸಂಸ್ಥೆಯ ಚಂದ್ರು ಮನೋಹರ್‌ ಅವರ ಜತೆಗೆ ‘ಸಂಗೀತ್‌’ ಚಿತ್ರ ನಿರ್ಮಿಸಲಿದ್ದಾರೆ. ಈ ಚಿತ್ರಕ್ಕೆಸಾದ್ ಖಾನ್‌ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ.

ಸದ್ಯ ‘ಹಂಬಲ್‌ ಪೊಲಿಟಿಷಿಯನ್ ನಾಗರಾಜ್‌’ ವೆಬ್ ಸರಣಿಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿರುವ ಸಾದ್‌ ಖಾನ್, ‘ಸಂಗೀತ್‌’ ಚಿತ್ರದ ಚಿತ್ರಕಥೆಯ ಕೆಲಸ ಕೈಗೆತ್ತಿಕೊಂಡಿದ್ದಾರಂತೆ. ಈ ಚಿತ್ರವು ರೊಮ್ಯಾಂಟಿಕ್‌ ಕಾಮಿಡಿಯ ಕಥಾಹಂದರ ಹೊಂದಿರಲಿದ್ದು, ಇದರಲ್ಲಿ ಹೊಸ ಮುಖಗಳನ್ನುಪರಿಚಯಿಸುವ ಯೋಜನೆ ನಿರ್ದೇಶಕರದು. ಎಲ್ಲವೂ ಅಂದುಕೊಂಡಂತೆ ನಡೆದು, ಕೊರೊನಾ ಪರಿಸ್ಥಿತಿ ತಿಳಿಯಾದರೆ ನವೆಂಬರ್‌ನಿಂದ ಚಿತ್ರದ ಶೂಟಿಂಗ್‌ ಆರಂಭಿಸುವ ಉದ್ದೇಶ ಅವರದು.

ADVERTISEMENT

'ಜಾಗ್ವಾರ್‌', 'ಸೀತಾರಾಮ ಕಲ್ಯಾಣ' ಮತ್ತು 'ಕುರುಕ್ಷೇತ್ರ' ಸಿನಿಮಾಗಳಲ್ಲಿ ನಟಿಸಿರುವ ನಿಖಿಲ್‌ ಕುಮಾರಸ್ವಾಮಿ ಇತ್ತೀಚೆಗಷ್ಟೇ ರೇವತಿ ಎಂಬುವವರ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್‌ಡೌನ್‌ ವೇಳೆ ಅವರು ಕೃಷಿ ಚಟುವಟಿಕೆಯತ್ತಲೂ ಗಂಭೀರವಾಗಿ ಗಮನ ಹರಿಸಿದ್ದಾರೆ. ಕೃಷಿ ತಜ್ಞರನ್ನು ತಮ್ಮ ಜಮೀನಿಗೆ ಕರೆಸಿಕೊಂಡು ಯಾವೆಲ್ಲ ಬೆಳೆಗಳನ್ನು ಬೆಳೆಯಬಹುದೆಂಬ ಮಾಹಿತಿ ಪಡೆದುಕೊಂಡಿದ್ದಾರೆ.ರೈತರ ಬದುಕಿಗೆ ಮನ್ನಣೆ ತಂದುಕೊಡಲು ಕೃಷಿಯತ್ತ ಮುಖಮಾಡುವಂತೆಯುವಜನರಿಗೆ ಮನವಿ ಕೂಡ ಮಾಡಿದ್ದರು.

‘ಸಂಗೀತ್‌’ ಚಿತ್ರವನ್ನು ಲಹರಿ ಸಂಸ್ಥೆ ಮತ್ತುಎನ್‌ಕೆ ಎಂಟರ್‌ಟೈನ್‌ಮೆಂಟ್ಸ್‌ ಜಂಟಿಯಾಗಿ ನಿರ್ಮಾಣ ಮಾಡಲಿವೆ. ತಮ್ಮ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರುಈ ಹಿಂದೆ ತಮ್ಮ ಚೆನ್ನಾಂಬಿಕಾ ಫಿಲ್ಮ್ಸ್‌ ಬ್ಯಾನರ್ ಮೂಲಕ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿರುವಂತೆ ನಿಖಿಲ್‌ ಅವರಿಗೂ ಒಳ್ಳೊಳ್ಳೆಯ ಚಿತ್ರಗಳನ್ನು ನಿರ್ಮಿಸುವ ಕನಸುಗಳಿವೆ ಎನ್ನುತ್ತಾರೆ ಅವರ ಆಪ್ತರು.

ಈ ನಡುವೆ ನಿಖಿಲ್ ಕುಮಾರಸ್ವಾಮಿ‌ ಅವರು ಎರಡು ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ನಟಿಸಲುಒಪ್ಪಿಕೊಂಡಿದ್ದಾರೆ. ಇದರಲ್ಲಿ ಒಂದು ಚಿತ್ರವನ್ನು ಲಹರಿ ಸಂಸ್ಥೆ ನಿರ್ಮಿಸುತ್ತಿದ್ದು, ವಿಜಯ್‌ ಕುಮಾರ್ ಕೊಂಡ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಮತ್ತೊಂದು ಚಿತ್ರವನ್ನು ‘ಅದ್ದೂರಿ’ ಚಿತ್ರ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್‌ ನಿರ್ದೇಶಿಸಲಿದ್ದಾರೆ.ಎರಡೂ ಚಿತ್ರಗಳ ಚಿತ್ರೀಕರಣಇನ್ನಷ್ಟೇ ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.