‘ರೈಡರ್’ ಸಿನಿಮಾದ ನಂತರ ರಾಜಕೀಯ ಕಾರಣದಿಂದ ಸಿನಿಮಾ ಕೆಲಸಗಳಿಂದ ದೀರ್ಘ ಬ್ರೇಕ್ ತೆಗೆದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ಹೆಸರಿಡದ ನೂತನ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ.
ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಚಿತ್ರದ ಮೂಲಕ ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದೆ. ತಮಿಳಿನಲ್ಲಿ ‘ಬೋಗನ್’, ‘ಭೂಮಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲಕ್ಷ್ಮಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಎಚ್.ಡಿ. ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸಮಾರಂಭದಲ್ಲಿ ಹಾಜರಿದ್ದು ನಿಖಿಲ್ಗೆ ಶುಭ ಹಾರೈಸಿದರು. ಯುಕ್ತಿ ತರೇಜ ಚಿತ್ರದ ನಾಯಕಿ. ‘ಸೆಪ್ಟೆಂಬರ್ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಒಂದು ವರ್ಷದಿಂದ ಈ ಚಿತ್ರಕ್ಕಾಗಿ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಬಹಳ ಭರವಸೆ ಇರುವ ಚಿತ್ರ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಕ್ರಿಯನಾಗಿ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ’ ಎಂದರು ನಿಖಿಲ್ ಕುಮಾರಸ್ವಾಮಿ.
‘ನಾನು ಮಗನಿಗಾಗಿಯೇ ಒಂದು ಕಥೆ ಮಾಡಿಸಿದ್ದೆ. ನಮ್ಮದೇ ನಿರ್ಮಾಣ ಸಂಸ್ಥೆಯಿಂದ ಆ ಸಿನಿಮಾ ಮಾಡಬೇಕು ಎಂದಿತ್ತು. ಆದರೆ ನಿಖಿಲ್ ಆ ಚಿತ್ರ ಮಾಡಲು ಒಪ್ಪಲಿಲ್ಲ. ಅದರಿಂದ ಆಡಿಕೊಳ್ಳುವವರ ಬಾಯಿಗೆ ಆಹಾರವಾಗುತ್ತೀವಿ ಎಂಬ ಭಯ ಆತನಲ್ಲಿತ್ತು. ಈಗಲೂ ಆತ ಒಪ್ಪಿದರೆ ನಮ್ಮದೇ ನಿರ್ಮಾಣ ಸಂಸ್ಥೆ ಚಿತ್ರವೊಂದು ತಯಾರಾಗಲಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅಜನೀಶ್ ಲೋಕನಾಥ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.