ಎರಡು ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ‘ಮಹಾನಟಿ’ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ದಕ್ಷಿಣ ಭಾರತದ ಖ್ಯಾತ ನಟಿ ಸಾವಿತ್ರಿ ಅವರ ಜೀವನಚರಿತ್ರೆ ಕುರಿತ ಸಿನಿಮಾ ಇದು. ಇದರಲ್ಲಿನ ಮನೋಜ್ಞ ಅಭಿನಯಕ್ಕೆ ನಟಿ ಕೀರ್ತಿ ಸುರೇಶ್ಗೆ ರಾಷ್ಟ್ರಪ್ರಶಸ್ತಿಯೂ ಒಲಿದು ಬಂದಿತ್ತು. ಅಂದಹಾಗೆ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ನಾಗ್ ಅಶ್ವಿನ್. ಈ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕಾಗಿ ಅವರಿಹಗೆ ಫಿಲ್ಮ್ಫೇರ್ ಪ್ರಶಸ್ತಿಯೂ ಲಭಿಸಿತ್ತು. ಹೈದರಾಬಾದ್ ಮೂಲದ ಈ ಯುವ ಪ್ರತಿಭೆ ಈಗ ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ.
ಪ್ರಸ್ತುತ ಪ್ರಭಾಸ್ ಅವರು ರಾಧಾ ಕೃಷ್ಣಕುಮಾರ್ ನಿರ್ದೇಶನದ ‘ಪ್ರಭಾಸ್ 20’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ಶೂಟಿಂಗ್ ಸ್ಥಗಿತಗೊಂಡಿರುವ ಇದರ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಇದಾದ ಬಳಿಕ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ನಡಿ ಹೊಸ ಸಿನಿಮಾ ಸೆಟ್ಟೇರುವುದು ಪಕ್ಕಾ ಆಗಿದೆ. ವಿಜ್ಞಾನದ ಕಥೆ ಆಧಾರಿತ ಚಿತ್ರ ಇದಾಗಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಈ ಸಿನಿಮಾಕ್ಕೆ ನಾಯಕಿಯನ್ನಾಗಿ ಕರೆತರಲು ಚಿತ್ರತಂಡ ನಿರ್ಧರಿಸಿತ್ತಂತೆ. ಆದರೆ, ಆಕೆ ದುಬಾರಿ ಸಂಭಾವನೆ ಬೇಡಿದ ಪರಿಣಾಮ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಅವರನ್ನು ಕರೆತರಲು ತೀರ್ಮಾನಿಸಿದೆ ಎಂಬ ಸುದ್ದಿ ಹೊರಬಿದ್ದಿದೆ.
ಹಿಂದಿಯ ‘ಕಬೀರ್ ಸಿಂಗ್’ ಖ್ಯಾತಿಯ ಕಿಯಾರಾಗೆ ಟಾಲಿವುಡ್ ಅಪರಿಚಿತವೇನಲ್ಲ. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ್ದು, ಮಹೇಶ್ ಬಾಬು ನಟನೆಯ ‘ಭರತ ಆನೆ ನೇನು’ ಚಿತ್ರದ ಮೂಲಕ. ಅದಾದ ಬಳಿಕ ರಾಮ್ ಚರಣ್ ನಾಯಕರಾಗಿದ್ದ ‘ವಿನಯ ವಿಧೇಯ ರಾಮ’ ಚಿತ್ರದಲ್ಲೂ ನಟಿಸಿದ್ದರು.
ನಾಗ್ ಅಶ್ವಿನ್ ಲಾಕ್ಡೌನ್ ಅವಧಿಯಲ್ಲಿಯೇ ಆಕೆಗೆ ಸ್ಕ್ರಿಪ್ಟ್ ಅನ್ನು ನಿರೂಪಿಸಿದ್ದಾರಂತೆ. ಹಸಿರು ನಿಶಾನೆ ನೀಡಿದರೆ ಟಾಲಿವುಡ್ನಲ್ಲಿ ಮತ್ತೆ ಕಿಯಾರಾ ಪ್ರತಿಭೆಯ ಪ್ರದರ್ಶನ ನಡೆಯಲಿದೆ. ಅಶ್ವಿನ್ ದತ್ ಇದಕ್ಕೆ ಬಂಡವಾಳ ಹೂಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.